ಬೆಂಗಳೂರು : ಬಿಡಿಎ ಹಾಲಿ ಕಮಿಷನರ್ ಹಾಗೂ ಹಿರಿಯ ಐಎಎಸ್ ಅಧಿಕಾರಿ ಎನ್. ಜಯರಾಮ್ ಅವಧಿಯಲ್ಲಿ ನಡೆದಿರುವ ಬಿಡಿಎ ಭೂ ಹಗರಣಗಳ ಬಗ್ಗೆ ಸಮಗ್ರ ತನಿಖೆಗೆ ರಾಜ್ಯ ಸರ್ಕಾರದ ನಿರ್ಧರಿಸಿದೆ.

ಇಂದು ಸೇವಾ ನಿವೃತ್ತಿಯಾಗಲಿರುವ ಬಿಡಿಎ ಕಮಿಷನರ್ ಹಾಗೂ ಐಎಎಸ್ ಅಧಿಕಾರಿ ಎನ್. ಜಯರಾಮ್ ವಿರುದ್ಧ ಹತ್ತಕ್ಕೂ ಹೆಚ್ಚು ದೂರುಗಳು ಸರ್ಕಾರದ ಮಟ್ಟದಲ್ಲಿ ದಾಖಲಾಗಿವೆ. ಬಿಡಿಎನಲ್ಲಿ ಸಗಟು ಸೈಟುಗಳ ಹಂಚಿಕೆ, ಬಿಡಿಎನಲ್ಲಿ ಬದಲಿ ಸೈಟುಗಳ ಹಂಚಿಕೆ, ಗುತ್ತಿಗೆದಾರರಿಗೆ ನಕಲಿ ಬಿಲ್ ನೀಡಿಕೆ, ಹಲವು ಭೂಮಿ ಮರು ಹಂಚಿಕೆ, ಇನ್ನೂ ಕೆಲವು ಸೊಸೈಟಿಗಳನ್ನು ಬಿಟ್ಟು ಖಾಸಗಿ ವ್ಯಕ್ತಿಗಳಿಗೆ 500 ಎಕರೆಗೂ ಹೆಚ್ಚು ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿರುವ ಬಗ್ಗೆ ಆರೋಪಗಳು ಕೇಳಿಬಂದಿದೆ.

ಹಾಗೆಯೇ ಟೆಂಡರ್ ಕರೆಯುವಲ್ಲಿ ಭಾರೀ ಲೋಪ ಎಸಗಲಾಗಿದೆ. ಹಲವು ಗುತ್ತಿಗೆದಾರರು ಸೇರಿಕೊಂಡು ಕೆಂಪೇಗೌಡ ಲೇಔಟ್, ವಿಶ್ವೇಶ್ವರಯ್ಯ ಲೇಔಟ್, ಶಿವರಾಮ ಕಾರಂತ್ ಲೇಔಟ್ಗಳಲ್ಲಿ ಭಾರೀ ಅಕ್ರಮ ಎಸಗಿದ್ದಾರೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ಹಲವು ದೂರುಗಳು ದಾಖಲಾಗಿದ್ದವು.

ಅಷ್ಟೇ ಅಲ್ಲದೆ ಎನ್. ಜಯರಾಮ್ ವಿರುದ್ಧ ಕೇಂದ್ರ ಮುಖ್ಯ ವಿಚಕ್ಷಣ ಆಯುಕ್ತರು ಹಾಗೂ ಇಡಿ ಮತ್ತು ಸಿಬಿಐನಲ್ಲೂ ದೂರು ದಾಖಲಾಗಿತ್ತು. ಇದೀಗ ಈ ಎಲ್ಲಾ ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಸೋಮವಾರ ಅಧಿಕೃತ ಆದೇಶ ಹೊರಬರಲಿದೆ.
ತನಿಖೆ ನಡೆದ ನಂತರ ಹಗರಣಗಳು ಸಾಬೀತಾದಲ್ಲಿ ಎನ್. ಜಯರಾಮ್ ವಿರುದ್ಧ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ. ಹಲವಾರು ಎಂಎಲ್ಎಗಳು ಸಾಮಾಜಿಕ ಕಾರ್ಯಕರ್ತರು ಪಕ್ಷದ ಮುಖಂಡರು ಜಯರಾಮ್ ಭ್ರಷ್ಟಾಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಬಳಿ ವ್ಯಾಪಕ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : BDA ಕಮಿಷನರ್ ಆಗಿ ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿ ಮೇಜರ್ ಮಣಿವಣ್ಣನ್ ನೇಮಕ!







