ನವದೆಹಲಿ : ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ ಬಳಿಕ ಭಾರತ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ ಭಾರತ, ಮಧ್ಯ ಭಾರತದಾದ್ಯಂತ ಗಡಿ ಭಾಗದಲ್ಲಿರುವ ಒಟ್ಟು 24 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಜಮ್ಮುವಿನ ಅನೇಕ ಪ್ರದೇಶಗಳು ಹಾಗೂ ಪಂಜಾಬ್ ಮತ್ತು ರಾಜಸ್ಥಾನದ ಕೆಲವು ಭಾಗಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸರಣಿ ಡೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದು, ಇದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಇದರ ನಡುವೆ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಭಾರತ ಬಂದಿದೆ.
ಬಂದ್ ಮಾಡಲಾದ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಚಂಡೀಗಢ, ಶ್ರೀನಗರ, ಅಮೃತಸರ, ಲುಧಿಯಾನ, ಭುಂಟರ್, ಕಿಶನ್ಗಢ, ಪಟಿಯಾಲ, ಶಿಮ್ಲಾ, ಕಂಗ್ರಾ-ಗಗ್ಗಲ್, ಬಟಿಂಡಾ, ಜೈಸಲ್ಮೀರ್, ಜೋಧಪುರ, ಬಿಕಾನೇರ್, ಹಲ್ವಾರ, ಪಠಾಣ್ಕೋಟ್, ಜಮ್ಮು, ಲೇಹ್, ಮುಂದ್ರಾ, ಜಾಮ್ನಗರ, ಹಿರಾಸಾ (ರಾಜ್ಕೋಟ್), ಪೋರಬಂದರ್, ಕೇಶೋದ್, ಕಾಂಡ್ಲಾ ಮತ್ತು ಭುಜ್ ಸೇರಿದೆ. ಇನ್ನು ಭಾರತೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣ ಸಲಹೆಗಳನ್ನು ನೀಡಿದ್ದು, ಅದಕ್ಕೆ ಅನುಗುಣವಾಗಿ ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಯನ್ನು ಪ್ಲ್ಯಾನ್ ಮಾಡಿಕೊಳ್ಳುವಂತೆ ತಿಳಿಸಿವೆ. ಇನ್ನೂ ದೇಶಾದ್ಯಂತ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ದೆಹಲಿ ಏರ್ಪೋರ್ಟ್ ಸಹಜ ಸ್ಥಿತಿಯಲ್ಲಿ ಕಾರ್ಯಾಚರಣೆ – ಕೆಲ ವಿಮಾನ ಹಾರಾಟ ರದ್ದು : ಇನ್ನೂ ದೇಶದ ರಾಜಧಾನಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಭದ್ರತೆ ಹೆಚ್ಚಿಸಿರುವ ಕಾರಣ ಕೆಲವು ವಿಮಾನಗಳ ಹಾರಾಟಗಳು ರದ್ದಾಗಿವೆ. ಪ್ರಯಾಣಿಕರು ತಮ್ಮ ವಿಮಾನಯಾನದ ಬಗ್ಗೆ ಮಾಹಿತಿ ತಿಳಿದುಕೊಂಡು ಏರ್ಪೋರ್ಟ್ಗೆ ಬರಲು ಸೂಚಿಸಲಾಗಿದೆ.
ಇದನ್ನೂ ಓದಿ : ಭಾರತದ ಒಟಿಟಿಯಲ್ಲಿ ಪಾಕ್ ಸಿನಿಮಾ, ಸೀರಿಯಲ್, ಪಾಡ್ಕಾಸ್ಟ್ ಸ್ಟ್ರೀಮಿಂಗ್ ಬ್ಯಾನ್ – ಕೇಂದ್ರ ಸರ್ಕಾರ ಆದೇಶ!
