ನವದೆಹಲಿ : ಇಂದಿನ ಬಜೆಟ್ನಲ್ಲಿ ಹೊಸತೇನು ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ. ಹೀಗೆ ಅನ್ಯಾಯ ಆದ್ರೆ ಪ್ರತ್ಯೇಕ ದೇಶ ಕೇಳಬೇಕಾಗುತ್ತದೆ ಎಂದು ಸಂಸದ ಡಿಕೆ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಮದ್ಯಂತರ ಬಜೆಟ್ ಮಂಡಿಸಿದ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಪ್ರತ್ಯೇಕ ದೇಶದ ಕೂಗು ಎತ್ತಿದ್ದಾರೆ. ದಕ್ಷಿಣ ಭಾರತಕ್ಕೆ ಪದೇ ಪದೇ ಅನ್ಯಾಯ ಆಗ್ತಿದೆ. ನಮ್ಮ ತೆರಿಗೆ ಹಣವನ್ನು ಹಿಂದಿ ರಾಜ್ಯಗಳಿಗೆ ಹಂಚಲಾಗ್ತಿದೆ. ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಹಂಚುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಅನ್ಯಾಯವಾಗಿದೆ ಎಂದು ಡಿ.ಕೆ ಸುರೇಶ್ ಕಿಡಿಕಾರಿದ್ದು, ನಮಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ನಮ್ಮಿಂದ 4 ಲಕ್ಷ ಕೋಟಿ ತೆರಿಗೆ ಸಂಗ್ರಹ ಆಗ್ತಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಸರಿಯಾದ ಹಂಚಿಕೆ ಆಗ್ತಿಲ್ಲ. ಕನ್ನಡ ನಾಮಫಲಕ ಸುಗ್ರೀವಾಜ್ಞೆ ವಿಚಾರದಲ್ಲೂ ಇದೇ ಆಗಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಕಳಿಸಿದ್ದಾರೆ. ಇದೇ ರೀತಿ ನಮ್ಮ ಮೇಲೆ ಹಿಂದಿಯವರ ಹೇರಿಕೆ ಹೆಚ್ಚಾಗ್ತಿದೆ. ಇದಕ್ಕೆಲ್ಲ ಪ್ರತ್ಯೇಕ ದೇಶದ ಕೂಗು ಎತ್ತದೇ ಬೇರೆ ಇನ್ನೇನೂ ಮಾಡಬೇಕು? ಎಂದು ದೆಹಲಿಯಲ್ಲಿ ಸಂಸದ ಡಿ.ಕೆ ಸುರೇಶ್ ಗುಡುಗಿದ್ದಾರೆ.
ಈ ಬಜೆಟ್ ನಲ್ಲಿ ನಾಮಫಲಕ ಮಾತ್ರ ಬದಲಾಯಿಸಲಾಗಿದೆ. ಬೇರೆ ಬೇರೆ ದೇಸಿ ಹೆಸರುಗಳನ್ನ ಇಡಲಾಗಿದೆ. ಎಕನಾಮಿಕ್ ಸರ್ವೆ ಅವರು ಇಟ್ಟಿದ್ದಿದ್ರೆ ಇವರ ಪರಿಸ್ಥಿತಿ ಏನಾಗುತ್ತಿತ್ತು?. ಯಾವ ರೀತಿ ದೇಶ ಕಳೆದ ಸಾಲಿನಲ್ಲಿ ಸಾಧನೆಯನ್ನು ಸಾಧಿಸಿದೆ ಅನ್ನೋ ಅನುಮಾನಗಳು ಪ್ರಾರಂಭವಾಗಿದೆ. ಚುನಾವಣೆಗೆ ಸಂಬಂಧಪಟ್ಟಂತೆ ಒಂದಷ್ಟು ಘೋಷಣೆಗಳು, ಒಂದಷ್ಟು ಹೇಳಿಕೆಗಳನ್ನು ಕೂಡಿರುವ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ರೌಡಿಶೀಟರ್ಗಳ ಗ್ಯಾಂಗ್ ಕಟ್ಟಿಕೊಂಡು ಬಿಲ್ಡರ್ಗಳ ಬಳಿ ಹಣ ವಸೂಲಿ ಮಾಡುತ್ತಿದ್ದ ನಕಲಿ RTI ಕಾರ್ಯಕರ್ತ ಅರೆಸ್ಟ್..!