ವಿಜಯಪುರ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದ 2 ವರ್ಷದ ಕಂದ ಕೊಳವೆ ಬಾವಿಗೆ ಬಿದ್ದಿತ್ತು. ಇದೀಗ ಕರ್ನಾಟಕದ ಜನರ ಪ್ರಾರ್ಥನೆ ಫಲಿಸಿದ್ದು, 20 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಬಳಿಕ ಎಸ್ಡಿಆರ್ಎಫ್, ಎನ್ಡಿಆರ್ಎಫ್ ತಂಡವು ಮಗುವನ್ನು ಜೀವಂತವಾಗಿ ಹೊರತೆಗೆದಿದೆ.
ಮಗು ಬಾವಿಗೆ ಬಿದ್ದ ತಕ್ಷಣ ಅರ್ಧ ಗಂಟೆ ಊರವರು ಮತ್ತು ಸ್ಥಳೀಯರು ಮಗುವಿನ ರಕ್ಷಣೆಗೆ ಮುಂದಾಗಿ ಸಾಧ್ಯವಾಗದೇ ಇದ್ದಾಗ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ತಕ್ಷಣ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.
ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನ 1:40ರ ವರೆಗೆ ಒಂದು ನಿಮಿಷವೂ ಬಿಡುವು ನೀಡದೆ NDRF, SDRF ತಂಡ ಸೇರಿದಂತೆ ಅಗ್ನಿಶಾಮಕ ದಳ, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ರಾತ್ರಿ ಇಡೀ ಕಣ್ಣಿಗೆ ನಿದ್ದೆ ಇಲ್ಲದೇ ಸಾತ್ವಿಕ್ನ ರಕ್ಷಣೆ ಮಾಡಲು ತೊಡಗಿದ್ದರು. ಇದರ ಜೊತೆಗೆ ಮಗುವಿನ ಚಲನವಲನ ಗಮನಿಸಲು ಎಂಡೋಸ್ಕೋಪ್ ಕ್ಯಾಮೆರಾವನ್ನು ಕೊಳವೆ ಬಾವಿ ಒಳಗಡೆ ಬಿಡಲಾಗಿತ್ತು. ಈ ಕ್ಯಾಮಾರದಲ್ಲಿ ಮಗು ಕಾಲು ಅಲ್ಲಾಡಿಸುತ್ತಿರುವುದು ಸೆರೆಯಾಗಿತ್ತು.
ಬುಧವಾರ ಸಂಜೆ 6 ಗಂಟೆಗೆ ಕೊಳವೆ ಬಾವಿಗೆ ಬಿದ್ದ ಮಗು 20 ಗಂಟೆಗಳಿಂದ ಅನ್ನ ನೀರು ಇಲ್ಲದೆ ಜೀವನ್ಮರಣ ಹೋರಾಟ ನಡೆಸುತ್ತಿತ್ತು. ಇದೀಗ ಕಾರ್ಯಚರಣೆಯಿಂದ 20 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡ ಮಗುವನ್ನು ಸುತಕ್ಷಿತವಾಗಿ ಹೊರತೆಗೆಯುವಲ್ಲಿರಕ್ಷಣೆ ಸಿಬ್ಬಂದಿಗಳ ಯಶಸ್ವಿಯಾಗಿದ್ದಾರೆ.
ಇನ್ನು ಮಗುವನ್ನು ಹೊರ ತೆಗೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರ ತಂಡ ಬಳಿಕ ಆಂಬುಲೆನ್ಸ್ನಲ್ಲಿ ಮಗುವನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದೆ. ಸ್ಥಳದಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿಯ ಪ್ರಾರ್ಥನೆ ಕೊನೆಗೂ ಫಲಿಸಿದ್ದು, ಮಗು ಜೀವಂತವಾಗಿ ಬಂದಿದೆ. ರಕ್ಷಣಾ ಕಾರ್ಯಾಚರಣೆ ಇನ್ನೇನು ಕೊನೆ ಕ್ಷಣಕ್ಕೆ ತಲುಪುತ್ತಿದ್ದಂತೆಯೇ ಮಗು ಅಳುವ ಸದ್ದು ಜೋರಾಗಿ ಕೇಳಿಸುತ್ತಿತ್ತು.
ಇದನ್ನೂ ಓದಿ : ವಿಜಯಪುರದಲ್ಲಿ ಸಾತ್ವಿಕ್ ರಕ್ಷಣೆಗೆ ರಣರೋಚಕ ಆಪರೇಷನ್ : ಕಂದಮ್ಮ ಅಳುತ್ತಿರುವ ಧ್ವನಿ ಕೇಳಿಸಿಕೊಂಡ ರಕ್ಷಣಾ ಸಿಬ್ಬಂದಿ..!