ಮೇ 12ರಿಂದ ಸ್ಟಾರ್‌ ಸುವರ್ಣದಲ್ಲಿ ಹೊಸ ಸೀರಿಯಲ್.. ‘ಸ್ನೇಹದ ಕಡಲಲ್ಲಿ’ ಮೂಲಕ ಕನ್ನಡ ಕಿರುತೆರೆಗೆ ಸುಮನ್ ತಲ್ವಾರ್ ಎಂಟ್ರಿ!

ಅನೇಕ ಮೊದಲುಗಳಿಗೆ ಸಾಕ್ಷಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಹೊಸತನದ ಧಾರಾವಾಹಿಗಳನ್ನು ನೀಡುತ್ತಾ ಬರುತ್ತಿದೆ. ಈ ಸಾಲಿಗೆ ಸೇರಲಿರುವ ಹೊಸ ಕಥೆ “ಸ್ನೇಹದ ಕಡಲಲ್ಲಿ”. ಮಧ್ಯಮ ಕುಟುಂಬದಲ್ಲಿ ಬೆಳೆದಿರೋ ಸಿಂಪಲ್ ಹುಡುಗಿ ಕಥಾ ನಾಯಕಿ ಪಲ್ಲವಿ, ಹೆಚ್ಚು ಓದಿರೋ ಈಕೆ ಸೌಮ್ಯ ಗುಣದವಳು. ಮನೆಯವರ ಇಚ್ಛೆಯಂತೆ ಮದುವೆಯಾಗೋ ಪಲ್ಲವಿಗೆ ಮೊದಲ ರಾತ್ರಿಯಲ್ಲಿ ಗಂಡನ ನಿಜ ಮುಖದ ಅರಿವಾಗುತ್ತೆ, ಅದೇ ಕ್ಷಣದಲ್ಲಿ ಗಂಡನ ಮನೆ ಬಿಟ್ಟು ಡೈವೋರ್ಸ್ ಕೊಡೋಕೆ ಮುಂದಾಗುತ್ತಾಳೆ. ಇಂತಹ ಸಮಯದಲ್ಲಿ ಸ್ನೇಹಿತನಾಗಿ ಸಾಥ್ ಕೊಡೋದು ಶಿವರಾಜ್ ಅರಸ್.

ಕಥಾನಾಯಕ ಶಿವರಾಜ್ ಅರಸ್ ಈ ಮದುವೆಗೆ ಇವೆಂಟ್‌ ಮ್ಯಾನೆಜ್ ಮೆಂಟ್ ನ ಜವಾಬ್ದಾರಿಯನ್ನು ಹೊತ್ತಿರುತ್ತಾನೆ. ಈತ ಖ್ಯಾತ ಉದ್ಯಮಿ ಮಾಧವ ಅರಸ್ ನ ಮಗ. ಕಾರಣಾಂತರಗಳಿಂದಾಗಿ ಅಪ್ಪ- ಮಗನ ಬಾಂಧವ್ಯ ಸರಿ ಇರಲ್ಲ. ಜೊತೆಗೆ ಅಣ್ಣನನ್ನು ದ್ವೇಷಿಸೋ ತಂಗಿಯರು. ಹೀಗೆ ಸಂಬಂಧಗಳ ಸುಳಿಯಲ್ಲಿ ಸಿಲುಕಿರುವ ಶಿವರಾಜ್ ಗೆ ಸಾಥ್ ಕೊಡೋ ಪಲ್ಲವಿಯ ಸ್ನೇಹ ಸೇತುವೆಯಾಗುತ್ತಾ? ಗಂಡನನ್ನು ಬಿಟ್ಟು ಬಂದಿರೋ ಪಲ್ಲವಿಗೆ ಆಸರೆಯಾಗುವ ಶಿವರಾಜ್ ನ ಈ ಸ್ನೇಹವನ್ನು ಸಮಾಜ ಒಪ್ಪುತ್ತಾ? ಸ್ನೇಹದ ಕಡಲಲ್ಲಿರೋ ಇವರಿಬ್ಬರ ಜೀವನದ ದಿಕ್ಕು ಮುಂದೆ ಯಾವ ರೀತಿ ತಿರುವು ಪಡೆಯಲಿದೆ? ಎಂಬುದೇ ಧಾರಾವಾಹಿಯ ಮುಖ್ಯ ಕಥೆ.

ಇನ್ನು ಈ ಸೀರಿಯಲ್ ನ ಪ್ರಮುಖ ಆಕರ್ಷಣೆ ಅಂದ್ರೆ ದಕ್ಷಿಣ ಭಾರತದ ಸುಪ್ರಸಿದ್ದ ಖ್ಯಾತ ನಟ, ಏಳ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗು 11 ಭಾಷೆಗಳಲ್ಲಿ ನಟಿಸಿರೋ ‘ಸುಮನ್ ತಲ್ವಾರ್‘ ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣದ ಮೂಲಕ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲತಃ ಮಂಗಳೂರಿನವರಾಗಿರೋ ಇವರು ‘ಸ್ನೇಹದ ಕಡಲಲ್ಲಿ’ ಧಾರಾವಾಹಿಯಲ್ಲಿ ಮಾಧವ ಅರಸ್ ಎಂಬ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಅತ್ಯದ್ಭುತ ತಾರಾಬಳಗವನ್ನು ಹೊಂದಿರೋ ಈ ಧಾರಾವಾಹಿಯಲ್ಲಿ ನಾಯಕನಾಗಿ ಚಂದು ಗೌಡ ಹಾಗು ನಾಯಕಿಯಾಗಿ ಕಾವ್ಯ ಮಹದೇವ್ ನಟಿಸುತ್ತಿದ್ದಾರೆ. ಜೊತೆಗೆ ಅನನ್ಯ ಕಾಸರವಳ್ಳಿ, ಹೇಮಾ ಬೆಳ್ಳೂರು, ಸಮೀಪ್ ಆಚಾರ್ಯ, ಅಭಿಜ್ಞಾ ಭಟ್, ನಯನ ಸೇರಿದಂತೆ ಇನ್ನು ಅನೇಕರು ಅಭಿನಯಿಸುತ್ತಿದ್ದಾರೆ. ‘ಪಿಂಗಾರ ಪ್ರೊಡಕ್ಷನ್ಸ್’ ಎಂಬ ಸಂಸ್ಥೆಯಡಿ ನಿರ್ದೇಶಕ ಪ್ರೀತಮ್ ಶೆಟ್ಟಿ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ಶುರುವಾಗ್ತಿದೆ ಎರಡು ನೊಂದ ಹೃದಯಗಳ ಸುಂದರ ಸ್ನೇಹದ ಹೊಸ ಧಾರಾವಾಹಿ “ಸ್ನೇಹದ ಕಡಲಲ್ಲಿ” ಇದೇ ಮೇ 12 ರಿಂದ ಪ್ರತಿದಿನ ರಾತ್ರಿ 8.30ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.

ಇದನ್ನೂ ಓದಿ : ಜೈಲಿನಲ್ಲಿರುವ ಜನಾರ್ದನ ರೆಡ್ಡಿಗೆ ಮತ್ತೊಂದು​ ಶಾಕ್​.. ಶಾಸಕ ಸ್ಥಾನದಿಂದ ಅನರ್ಹ – ಎಷ್ಟು ವರ್ಷ?

Btv Kannada
Author: Btv Kannada

Read More