ಬೆಂಗಳೂರು : ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಆತಂಕ ಎದುರಾಗಿರುವುದರಿಂದ ದೇಶಾದ್ಯಂತ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯುದ್ಧ ಸನ್ನಿವೇಶದ ಮಾಕ್ ಡ್ರಿಲ್ ನಡೆಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ದೇಶದ 259 ಸ್ಥಳಗಳಲ್ಲಿ ಇಂದು ಮಾಕ್ ಡ್ರಿಲ್ ನಡೆಯಲಿದ್ದು, ಸೈರನ್ಗಳು ಮೊಳಗಲಿವೆ. ಬೆಂಗಳೂರಿನ 35 ಕಡೆಗಳಲ್ಲಿ ಸೈರನ್ಗಳಿದ್ದು, ಆ ಪೈಕಿ 32 ಸೈರನ್ಗಳು ಕಾರ್ಯನಿರ್ವಹಿಸುತ್ತಿವೆ. ಸೈರನ್ ಕಾರ್ಯನಿರ್ವಹಿಸುವ ಕಡೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದ್ದು, ಸಾರ್ವಜನಿಕಕರು ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸೈರನ್? ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಸಿಕ್ಯೂಎಎಲ್, ಇಎಸ್ಐ ಆಸ್ಪತ್ರೆ, ಎನ್ಎಎಲ್, ಬೆಂಗಳೂರು ಡೇರಿ, ಕೆನರಾ ಬ್ಯಾಂಕ್, ಪೀಣ್ಯ, ವಿವಿ ಟವರ್, ಅಗ್ನಿಶಾಮಕ ಠಾಣೆ, ಜ್ಞಾನಭಾರತಿ ಅಗ್ನಿಶಾಮಕ ಠಾಣೆ, ಥಣಿಸಂದ್ರ ಅಗ್ನಿಶಾಮಕ ಠಾಣೆ, ಬಾಣಸವಾಡಿ ಅಗ್ನಿಶಾಮಕ ಠಾಣೆ, ಯಶವಂತಪುರ ಅಗ್ನಿಶಾಮಕ ಠಾಣೆ, ಬನಶಂಕರಿ ಅಗ್ನಿಶಾಮಕ ಠಾಣೆ, ರಾಜಾಜಿನಗರ ಅಗ್ನಿಶಾಮಕ ಠಾಣೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ, ಹಲಸೂರು ಗೇಟ್ ಪೊಲೀಸ್ ಠಾಣೆ, ಹಲಸೂರು ಪೊಲೀಸ್ ಠಾಣೆ, ಉಪ್ಪಾರಪೇಟೆ ಪೊಲೀಸ್ ಠಾಣೆ, ರಾಜರಾಜೇಶ್ವರಿನಗರ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ, ಕೆ.ಆರ್. ಮಾರ್ಕೆಟ್ ಪೊಲೀಸ್ ಠಾಣೆ, ವೈಯಾಲಿಕಾವಲ್ ಪೊಲೀಸ್ ಠಾಣೆ, ಹಲಸೂರು ಗೃಹರಕ್ಷಕ ದಳ ಕೇಂದ್ರ ಕಚೇರಿ, ಪೀಣ್ಯ ಅಗ್ನಿಶಾಮಕ ಠಾಣೆ, ಬೆಂಗಳೂರು ಗ್ರಾಮಾಂತರ ಗೃಹರಕ್ಷಕ ದಳ ಕಚೇರಿ, ಬಾಗಲೂರು ಅಗ್ನಿಶಾಮಕ ಠಾಣೆ, ಅಂಜನಾಪುರ ಅಗ್ನಿಶಾಮಕ ಠಾಣೆ, ಐಟಿಪಿಎಲ್ ಅಗ್ನಿಶಾಮಕ ಠಾಣೆ, ಸರ್ಜಾಪುರ ಅಗ್ನಿಶಾಮಕ ಠಾಣೆ, ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆ ಮತ್ತು ಡೇರಿ ಸರ್ಕಲ್ ಅಗ್ನಿಶಾಮಕ ಠಾಣೆಯಲ್ಲಿ ನಡೆಯಲಿದೆ.
ಯುದ್ಧದಂತಹ ತುರ್ತು ಸಂದರ್ಭದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು, ಯಾವ ಪರಿಕರಗಳನ್ನು ಬಳಸಬೇಕು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ, ವೈದ್ಯಕೀಯ ನೆರವು ಇತ್ಯಾದಿಗಳಿಗೆ ಸಜ್ಜುಗೊಳಿಸುವುದು ಈ ಅಣಕು ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಮಾಕ್ ಡ್ರಿಲ್ನಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೌರ ರಕ್ಷಣೆಯ ವಾರ್ಡನ್ಗಳು, ಗೃಹರಕ್ಷಕ ದಳ, ಸಿಆರ್ಪಿಎಫ್, ಸಿವಿಲ್ ಪೊಲೀಸ್ ಸಿಬ್ಬಂದಿ, ಎನ್ಸಿಸಿ, ನೆಹರೂ ಯುವ ಕೇಂದ್ರ ಸಂಘಟನೆ ಸದಸ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.
ಮೂರು ಬಾರಿ ಸೈರನ್ : ಅಣಕು ಕಾರ್ಯಾಚರಣೆಗೆ ಗುರುತಿಸಿದ ನಗರಗಳಲ್ಲಿ ಮೂರು ವಿಧದ ಸೈರನ್ಗಳು ಕೇಳಿಸಲಿವೆ. ಇದು ಸುಮಾರು 3 ಕಿ.ಮೀ. ವ್ಯಾಪ್ತಿಯವರೆಗೂ ಕೇಳಿಸಲಿದೆ. ಮೊದಲ ಸೈರನ್ ದಾಳಿ ನಡೆಯುವ ಸ್ಥಳದ ಜನರಿಗೆ ಎಚ್ಚರಿಕೆಯ ಸಂದೇಶ, ಎರಡನೇ ಸೈರನ್ ದಾಳಿ ಸಂದರ್ಭ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಮೂರನೇ ಸೈರನ್ ಮೊಳಗಲಿದೆ.
ವಿದ್ಯುತ್ ದೀಪ ಬಂದ್ : ವಾಯು ದಾಳಿಯಂತಹ ಸಂದರ್ಭಗಳಲ್ಲಿ ಶತ್ರುಗಳಿಗೆ ನಮ್ಮಲ್ಲಿನ ಜನಸಂಖ್ಯೆಯಿರುವ ಸ್ಥಳಗಳ ಗುರುತು ಸಿಗದಂತೆ ತಡೆಯಲು ವಿದ್ಯುತ್ ದೀಪಗಳು ಸಂಪೂರ್ಣ ಬಂದ್ ಆಗಲಿವೆ. ಜತೆಗೆ, ರಾತ್ರಿ ವೇಳೆ ವಾಹನ ಸಂಚಾರ ಸ್ಥಗಿತವಾಗಲಿದೆ. ಗುರುತಿಸಲಾದ ನಗರಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುವುದು. 1971ರ ಯುದ್ಧದಲ್ಲಿ ಈ ಮಾದರಿ ಅಳವಡಿಸಲಾಗಿತ್ತು. ಇದೀಗ ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ರಾಜ್ಯದ ಬೆಂಗಳೂರು ನಗರ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ‘ಪಾಪಿ’ಸ್ತಾನಕ್ಕೆ ಭಾರತೀಯ ಮಹಿಳಾ ಸೇನಾಧಿಕಾರಿಗಳ ಡಿಚ್ಚಿ – ಉಗ್ರ ನರಮೇಧ ಮಾಹಿತಿ ಬಿಚ್ಚಿಟ್ಟ ನಾರಿ ಶಕ್ತಿ!
