ಕೊಹ್ಲಿ-ಕೃನಲ್ ಆರ್ಭಟ​.. ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ RCB – ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ!

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 6 ವಿಕೆಟ್​ಗಳಿಂದ ಭರ್ಜರಿ ಗೆಲವು ಸಾಧಿಸುವ ಮೂಲಕ ಈ ಹಿಂದೆ ತವರಿನಲ್ಲಿ ಸೋತ ಸೇಡನ್ನು ತೀರಿಸಿಕೊಂಡಿದೆ. ಕಿಂಗ್ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯರ ಅಬ್ಬರದ ಬ್ಯಾಟಿಂಗ್​ನಿಂದ ಆರ್​ಸಿಬಿ ಜಯಭೇರಿ ಬಾರಿಸಿದೆ.

ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಡಬಲ್​ ಹೆಡ್ಡರ್​ನ 2ನೇ ಪಂದ್ಯದಲ್ಲಿ ಆರ್​ಸಿಬಿ ಕ್ಯಾಪ್ಟನ್​ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡರು. ಇದರಿಂದ ತವರಿನಲ್ಲಿ ಡೆಲ್ಲಿ ಕ್ಯಾ​ಪಿಟಲ್ಸ್​ ಮೊದಲ ಬ್ಯಾಟಿಂಗ್ ಮಾಡಿತು. ಡೆಲ್ಲಿ ಪರವಾಗಿ ಓಪನರ್ ಆಗಿ ಕ್ರೀಸ್​ಗೆ ಅಗಮಿಸಿದ ಫಾಫ್​ ಡುಪ್ಲೆಸ್ಸಿಸ್ 22​​ ಹಾಗೂ ಅಭಿಷೇಕ್ ಪೊರೆಲ್ 28 ರನ್​ಗೆ ವಿಕೆಟ್​ ಒಪ್ಪಿಸಿದರು. ಕನ್ನಡಿಗ ಕರುಣ್ ನಾಯರ್ ಕೇವಲ 4 ರನ್​ಗೆ ಯಶ್​ ದಯಾಳ್ ಬೌಲಿಂಗ್​ನಲ್ಲಿ ಔಟ್ ಆದರು.

ಡೆಲ್ಲಿ ತಂಡದ ಸ್ಟಾರ್​​ ಕೆ.ಎಲ್ ರಾಹುಲ್​ ಕೆಲ ಹೊತ್ತು ಬೌಲರ್​ಗಳನ್ನ ಕಾಡಿದರು. 39 ಬಾಲ್​ಗಳನ್ನು ಎದುರಿಸಿದ್ದ ಕೆ.ಎಲ್ ರಾಹುಲ್​ 3 ಬೌಂಡರಿ ಸಮೇತ 41 ರನ್​ ಗಳಿಸಿ ಆಡುವಾಗ ಭುವನೇಶ್ವರ್​ ಬೌಲಿಂಗ್​ನಲ್ಲಿ ಕ್ಯಾಚ್​ಗೆ ಬಲಿಯಾದರು. ಇನ್ನು ನಾಯಕ ಅಕ್ಷರ್ ಪಟೇಲ್​ 15, ಅಶುತೋಷ್ ಶರ್ಮಾ 2, ವಿಪ್ರಜ್ ನಿಗಮ್ 12 ರನ್​ಗಳಿಂದ ಡೆಲ್ಲಿ ಕ್ಯಾಪಿಟಲ್ಸ್​ 20 ಓವರ್​​ಗಳಲ್ಲಿ 8 ವಿಕೆಟ್​ಗೆ​ 163 ರನ್​ಗಳ ಗುರಿ ನೀಡಿತ್ತು.

ಈ ಗುರಿ ಬೆನ್ನಟ್ಟಿದ್ದ ಆರ್​ಸಿಬಿ ಆರಂಭದಲ್ಲೇ ದೊಡ್ಡ ಆಘಾತಕ್ಕೆ ಒಳಗಾಯಿತು. ಆರಂಭದ ಮೂರು ವಿಕೆಟ್​ಗಳು ಬ್ಯಾಕ್ ಟು ಬ್ಯಾಕ್​ ಹೋಗಿದ್ದರಿಂದ ಆರ್​ಸಿಬಿ ಸಂಕಷ್ಟದಲ್ಲಿ ಸಿಲುಕಿತ್ತು.

ಆದರೆ ಈ ವೇಳೆ ಬೆಂಗಳೂರು ತಂಡಕ್ಕೆ ಆಸರೆಯಾಗಿದ್ದು ವಿರಾಟ್​ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯೆ ಬ್ಯಾಟಿಂಗ್​. ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದ ಕೃನಾಲ್ ಪಾಂಡ್ಯ, ಡೆಲ್ಲಿ ಬೌಲರ್​ಗಳಿಗೆ ಮನ ಬಂದಂತೆ ಚಚ್ಚಿದರು. ಇನ್ನೊಂದೆಡೆ ತಾಳ್ಮೆಯ ಬ್ಯಾಟಿಂಗ್ ಮಾಡಿದ ಕಿಂಗ್​ ಕೊಹ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. 45 ಬಾಲ್​ಗಳನ್ನು ಎದುರಿಸಿದ ಕೊಹ್ಲಿ ಸಿಕ್ಸರ್​ ಬಾರಿಸದೇ 4 ಬೌಂಡರಿಗಳಿಂದ 50 ರನ್​ಗಳನ್ನು ಬಾರಿಸಿದರು. ಕೊನೆಯಲ್ಲಿ ಆರ್​ಸಿಬಿ ಗೆಲುವಿನ ಸನಿಹದಲ್ಲಿದ್ದಾಗ ಕೊಹ್ಲಿ, ಮಿಚೆಲ್ ಸ್ಟಾರ್ಕ್​​ಗೆ ಕ್ಯಾಚ್​ ಕೊಟ್ಟು ಪೆವಿಲಿಯನ್​ ಸೇರಿದರು.

ಆದರೆ ಇನ್ನೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದ ಕೃನಾಲ್ ಪಾಂಡ್ಯ ಡೆಲ್ಲಿ ಬೌಲರ್​ಗಳಿಗೆ ಬೆವರಿಳಿಸಿದರು. ಆರಂಭದಿಂದಲೂ ಚುರುಕಿನ ಬ್ಯಾಟಿಂಗ್ ಮಾಡಿದ ಕೃನಾಲ್ ಪಾಂಡ್ಯ ಪಂದ್ಯದಲ್ಲಿ ಔಟ್​ ಆಗದೇ ಕೇವಲ 47 ಎಸೆತಗಳಲ್ಲಿ 5 ಬೌಂಡರಿ, 4 ಬಿಗ್​ ಸಿಕ್ಸರ್​​ನಿಂದ 73 ರನ್​ ಸಿಡಿಸಿದರು. ಕೊನೆಯಲ್ಲಿ ಬ್ಯಾಟಿಂಗ್​ಗೆ ಬಂದ ಟಿಮ್​ ಡೇವಿಡ್​ ಕೂಡ ಡೆಲ್ಲಿಗೆ ಸರಿಯಾದ ಪೆಟ್ಟು ಕೊಟ್ಟರು. ಕೇವಲ 5 ಬಾಲ್​ನಲ್ಲಿ 19 ರನ್​ ಬಾರಿಸಿದರು. ಇದರಿಂದ ಆರ್​ಸಿಬಿ 18.3 ಓವರ್​​ನಲ್ಲಿ 4 ವಿಕೆಟ್​​ಗೆ 165 ರನ್​ ಗಳಿಸಿ ಜಯಭೇರಿ ಬಾರಿಸಿತು.

ಇದನ್ನೂ ಓದಿ : ಧರ್ಮ ಕೀರ್ತಿರಾಜ್ ಅಭಿನಯದ ‘ಟಕೀಲಾ’ ಸಿನಿಮಾ ಮುಂದಿನ ತಿಂಗಳು ತೆರೆಗೆ!

Btv Kannada
Author: Btv Kannada

Read More

Read More