ದಕ್ಷ IAS ಅಧಿಕಾರಿ ಮಹಾಂತೇಶ್ ಬೀಳಗಿ ಕುಟುಂಬಕ್ಕೆ ಕ್ಲಾಸ್-1 ಹುದ್ದೆ ನೀಡಿ – ಸಿಎಂಗೆ ಬಿವೈ ವಿಜಯೇಂದ್ರ ಪತ್ರ!

ಬೆಂಗಳೂರು : ಭೀಕರ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದ ದಕ್ಷ, ಪ್ರಾಮಾಣಿಕ ಹಿರಿಯ IAS ಅಧಿಕಾರಿ ಮಹಾಂತೇಶ ಬೀಳಗಿ ಅವರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಕ್ಲಾಸ್-1 ಅಧಿಕಾರಿ ಹುದ್ದೆ ನೀಡುವಂತೆ ಬಿವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಮಹಾಂತೇಶ ಬೀಳಗಿ ಅವರು ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ (KSMCL) ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದು, ಅವರ ನಿಧನವು ಇಡೀ ಆಡಳಿತ ಮತ್ತು ಸಾರ್ವಜನಿಕ ವಲಯಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ. ಇದೀಗ ಅವರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಕ್ಲಾಸ್-1 ಅಧಿಕಾರಿ ಹುದ್ದೆ ನೀಡುವಂತೆ ಬಿವೈ ವಿಜಯೇಂದ್ರ ಸಿಎಂಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನ ಹೊಂದಿರುವುದು ತಮಗೆ ಗೊತ್ತಿರುವ ವಿಚಾರ.

ಒಬ್ಬ ಸರ್ಕಾರಿ ಅಧಿಕಾರಿಯಾಗಿ ಕೇವಲ ಸರಕಾರಿ ಕೆಲಸ ಎಂದು ಪರಿಗಣಿಸದೆ ಬಡವರ ಅಶಕ್ತರ ಅಭಿವೃದ್ಧಿಗಾಗಿ ಅಂತಕರಣದಿಂದ ಕೆಲಸ ಮಾಡಿದ ಬಸವಾದಿ ಶರಣರಲ್ಲಿ ನಂಬಿಕೆ ಇಟ್ಟು ಜನಸೇವೆಗೈದ ಮಹಾಂತೇಶ್ ಬೀಳಗಿಯವರು ಒಬ್ಬ ಆದರ್ಶ ಅಧಿಕಾರಿಯಾಗಿದ್ದರು. ಅವರ ಆಕಾಲಿಕ ನಿಧನವು ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ನಷ್ಟವನ್ನುಂಟು ಮಾಡಿದೆ.

ಈ ಹಿಂದೆ ಅಧಿಕಾರಿಗಳು ಆಕಾಲಿಕವಾಗಿ ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರಿಗೆ ಕ್ಲಾಸ್-1 ಅಧಿಕಾರಿ ಹುದ್ದೆಯನ್ನು ನೀಡಿದ ಹಲವು ನಿದರ್ಶನಗಳಿವೆ. ಅದರಂತೆ ಮಹಾಂತೇಶ್ ಬೀಳಗಿ ಅವರ ಅಕಾಲಿಕ ನಿಧನವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಅವರ ಪತ್ನಿ ಅಥವಾ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಕ್ಲಾಸ್-1 ಅಧಿಕಾರಿ ಹುದ್ದೆಯನ್ನು ನೀಡುವಂತೆ ಬಿವೈ ವಿಜಯೇಂದ್ರ ಅವರು ಕೋರಿದ್ದಾರೆ.

ಇದನ್ನೂ ಓದಿ : ʻದಿ ಡೆವಿಲ್‌ʼ ಸಿನಿಮಾ ರಿಲೀಸ್​ಗೆ ರೆಡಿ – ಡಿ.11ಕ್ಕೆ ಬಿಗ್‌ ಸ್ಕ್ರೀನ್‌ನಲ್ಲಿ ದರ್ಶನ್‌ ಅಬ್ಬರ!

Btv Kannada
Author: Btv Kannada

Read More