ನವದೆಹಲಿ : ಭಾರತವು ಇಂದು 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಅಸಂಖ್ಯಾತ ಹೋರಾಟಗಾರರ ತ್ಯಾಗ ಬಲಿದಾನಗಳ ಫಲವಾಗಿ ಇಂದು ನಾವು ಆಚರಿಸುತ್ತಿರುವ ಸ್ವಾತಂತ್ರ್ಯೋತ್ಸವ ಆ ಮಹಾನ್ ಹೋರಾಟಗಾರರಿಗೆ ನೀಡುವ ಬಹುದೊಡ್ಡ ಗೌರವ.

ವಾಡಿಕೆಯಂತೆ ಇಂದು 12ನೇ ಬಾರಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. 1947ರಿಂದ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಈಗಿನ ಮೋದಿವರೆಗೂ ಎಲ್ಲ ಪ್ರಧಾನಿಗಳೂ ಕೆಂಪುಕೋಟೆಯಲ್ಲಿಯೇ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಪರಂಪರೆ ಹೀಗೆಯೇ ಮುಂದುವರಿಯಲಿದೆ.

ಹಾಗೆಯೇ 79ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿಲಿಕಾನ್ ಸಿಟಿಯ ಮಾಣಿಕ್ ಷಾ ಪರೇಡ್ ಮೈದಾನವೂ ಸಜ್ಜಾಗಿದೆ. ರಾಜಧಾನಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಭರ್ಜರಿ ಸಿದ್ಧತೆ ಮಾಡಲಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಈ ಬಾರಿ ಸ್ವಾತಂತ್ರ್ಯೋತ್ಸವ ಪರೇಡ್ನಲ್ಲಿ ಒಟ್ಟು 30 ತುಕಡಿಗಳಿಂದ ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದು, ಗೋವಾ ಪೊಲೀಸರ ವಿಶೇಷ ತಂಡ ಕೂಡ ಪರೇಡ್ನಲ್ಲಿ ಭಾಗಿಯಾಗಲಿದೆ. ಕೆಸ್ಆರ್ಪಿ (KSRP), ಬಿಎಸ್ಎಫ್ (BSF) ಮತ್ತು ಸಿಎಆರ್ (CAR), ಟ್ರಾಫಿಕ್ ಪೊಲೀಸ್, ಡಾಗ್ ಸ್ಕ್ವಾಡ್, ಪೊಲೀಸ್ ಬ್ಯಾಂಡ್ ಸೇರಿದಂತೆ ವಿವಿಧ ತಂಡಗಳು ಗೌರವ ರಕ್ಷೆ ಸ್ವೀಕರಿಸಲಿದ್ದು, ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಗಳನ್ನ ನಡೆಸಿಕೊಡಲಿದ್ದಾರೆ. ಇನ್ನು ಭದ್ರತಾ ದೃಷ್ಟಿಯಿಂದ ಮೈದಾನದ ಸುತ್ತ 100 ಸಿಸಿಟಿವಿ ಅಳವಡಿಸಲಾಗಿದ್ದು, 2 ಬ್ಯಾಗೇಜ್ ಸ್ಕ್ಯಾನರ್ಗಳನ್ನ ಅಳವಡಿಸಲಾಗಿದೆ. ಅಲ್ಲದೇ ಕಾರ್ಯಕ್ರಮಕ್ಕೆ ಬರುವವರಿಗೆ ಕಾರ್ಯಕ್ರಮ ನಡೆಯುವ ಜಾಗದಲ್ಲಿ ಮೊಬೈಲ್ ಬಳಕೆಯನ್ನ ಕೂಡ ನಿಷೇಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಎಲ್ಲೆಲ್ಲಿ ಸಂಚಾರ ನಿಷೇಧ?
- ಮಾಣಿಕ್ ಷಾ ಮೈದಾನ ಸುತ್ತಮುತ್ತ
- BRV ಜಂಕ್ಷನ್ ನಿಂದ ಕಾಮರಾಜ ಜಂಕ್ಷನ್
- ಕಬ್ಬನ್ ಪಾರ್ಕ್ ಸುತ್ತಮುತ್ತಲಿನ ರಸ್ತೆ
- ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣ
- ಕಬ್ಬನ್ ರಸ್ತೆ, ಸಿ.ಟಿ.ಓ ವೃತ್ತದಿಂದ ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್
- ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೆ
ಇದನ್ನೂ ಓದಿ : ಲಕ್ಷಾಂತರ ಜನರಿಗೆ ಅನ್ನ-ಅಕ್ಷರ ನೀಡಿದ್ದ ಸಂತ, ಕಲಬುರಗಿ ಜನರ ಆರಾಧ್ಯದೈವ ಶರಣಬಸಪ್ಪ ಅಪ್ಪ ಲಿಂಗೈಕ್ಯ!







