ಬೆಂಗಳೂರು : ಕಲಬುರಗಿ ಜಿಲ್ಲೆಯ ಆಳಂದದಲ್ಲಿ ನಡೆದಿದ್ದ ಬಹುದೊಡ್ಡ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಆಳಂದದಲ್ಲಿ ಅಂದು ನಿಷೇಧಾಜ್ಞೆ ಉಲ್ಲಂಘಿಸಿದ್ದ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಪುಂಡಾಟಿಕೆ ನಡೆಸಿದ್ದ ಮುಸ್ಲಿಂ ಸಮುದಾಯದವರದ್ದು ಸೇರಿದಂತೆ ಒಟ್ಟು 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಲೇ ಮಶಾಕ ದರ್ಗಾ ಆವರಣದಲ್ಲಿರುವ ರಾಘವಚೈತನ್ಯ ಶಿವಲಿಂಗದ ಮೇಲೆ ಕೆಲ ಬಾಲಾಪರಾಧಿಗಳು ಮಲಮೂತ್ರ ವಿಸರ್ಜನೆ ಮಾಡಿ ಅಪಮಾನ ಮಾಡಿದ್ದರು. ಈ ಘಟನೆಯು ಕರ್ನಾಟಕದಾದ್ಯಂತ ತೀವ್ರ ಸ್ವರೂಪದ ಆಕ್ರೋಶ ಮತ್ತು ಸಾರ್ವಜನಿಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು.
ಈ ಅಪಮಾನದ ವಿರುದ್ಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದ್ದರು. ಜೇವರ್ಗಿಯ ಆಂದೋಲ ಮಠದ ಸಿದ್ದಲಿಂಗಸ್ವಾಮಿಗಳ ನೇತೃತ್ವದಲ್ಲಿ ಶಿವಲಿಂಗದ ಶುದ್ಧೀಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಕಲಬುರಗಿ ನಗರದ ವಿಶ್ವಾರಾಧ್ಯ ಗುಡಿಯಿಂದ ಆಳಂದ ಚಲೋ ಮೆರವಣಿಗೆಗೆ ಕರೆ ನೀಡಲಾಗಿತ್ತು.
ಈ ವೇಳೆ ಕೋಮುಗಲಭೆ ಸಾಧ್ಯತೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರೂ, ಶ್ರೀರಾಮಸೇನೆ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಸಿದ್ದಲಿಂಗ ಸ್ವಾಮೀಜಿ ಅವರು ಪಟ್ಟಣ ಪ್ರವೇಶಿಸಿದ್ದರಿಂದ ಕ್ರಿಮಿನಲ್ ಪ್ರಕರಣ ದಾಖಿಸಲಾಗಿತ್ತು.
ಮತ್ತೊಂದೆಡೆ ಬಂದೋಬಸ್ತ್ಗೆ ಇದ್ದ ಪೊಲೀಸ್ ವಾಹನಕ್ಕೆ ಜಖಂ ಮಾಡಿ ಓಡಿ ಹೋಗುತ್ತಿದ್ದ ಅಕೀಬ ಅನ್ಸಾರಿ ಎಂಬ 22 ವರ್ಷದ ಮುಸ್ಲಿಂ ಯುವಕ, ನಿಷೇಧಾಜ್ಞೆ ಇದ್ದರೂ ಗುಂಪಾಗಿ ಸಂಚರಿಸಿದ್ದ ಆರೋಪದ ಮೇಲೆ 15 ವರ್ಷದ ಬಾಲಕ ಹಾಗೂ 16 ವರ್ಷದ ಮತ್ತೊಬ್ಬನ ಮೇಲೆ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ.
ವಾಟಾಳ್ ವಿರುದ್ಧದ 10 ಪ್ರಕರಣ ವಾಪಸ್:
ಕನ್ನಡಪರ ಹೋರಾಟಗಳು, ಮೇಕೆದಾಟು ಹೋರಾಟ, ಕಾವೇರಿ ವಿವಾದದ ವೇಳೆಯ ಹೋರಾಟಗಳ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಹಾಗೂ ಬೆಂಬಲಿಗರ ವಿರುದ್ಧ ದಾಖಲಾಗಿದ್ದ ಒಟ್ಟು 10 ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.
ಕನ್ನಡ ಹೋರಾಟಗಾರರ ವಿರುದ್ಧ ಪ್ರಕರಣಗಳು ರದ್ದು, ಕನ್ನಡ ನಾಮಫಲಕ ಚಳುವಳಿ ವೇಳೆ ಸೋಫಿಯಾ ಸ್ಕೂಲ್ ಬಳಿಯ ಸ್ಕೈವಾಕ್ ಮೇಲೆ ಅಂಟಿಸಿದ್ದ ಇಂಗ್ಲಿಷ್ ಬ್ಯಾನರ್ ತೆರವುಗೊಳಿಸಿದ್ದ ಪ್ರಕರಣದ ಸಂಬಂಧ ರೂಪೇಶ್ ರಾಜಣ್ಣ ವಿರುದ್ಧ ದಾಖಲಾಗಿದ್ದ ಪ್ರಕರಣ ಹಾಗೂ ವಿಧಾನಸೌಧದ ಠಾಣೆಯಲ್ಲಿ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣ ಸೇರಿದಂತೆ ಒಟ್ಟು 52 ಪ್ರಕರಣ ಹಿಂಪಡೆಯಲಾಗಿದೆ.
ಇದನ್ನೂ ಓದಿ : BJP ಶಾಸಕ ಮುನಿರತ್ನಗೆ ಬಿಗ್ ರಿಲೀಫ್ – SC-ST ದೌರ್ಜನ್ಯ ಕೇಸ್ ವಜಾ!









