ಬೆಂಗಳೂರು : ಅಪರಿಚಿತ ಮಹಿಳೆಯೋರ್ವಳು ಅತ್ತೆಯನ್ನೇ ಸಾಯಿಸಲು ಮಾಡಿರುವ ಮಾಸ್ಟರ್ ಪ್ಲಾನ್ ಬಯಲಾಗಿದ್ದು, ಆ ಲೇಡಿ ಮಾಡಿದ ಮೆಸೇಜ್ ನೋಡಿ ವೈದ್ಯರೊಬ್ಬರು ಬೆಚ್ಚಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು.. ಬೆಂಗಳೂರಿನಲ್ಲಿ ವೈದ್ಯರಾಗಿರುವ ಸುನೀಲ್ ಕುಮಾರ್ ಎಂಬವರ ವ್ಯಾಟ್ಸ್ಪ್ಗೆ ಈ ವಿಚಿತ್ರ ಸಂದೇಶ ಬಂದಿದೆ. ಅಪರಿಚಿತ ಮಹಿಳೆಯೋರ್ವಳು ಇನ್ಸ್ಟಾಗ್ರಾಮ್ ಮೂಲಕ ಡಾಕ್ಟರ್ ಸುನೀಲ್ ಅವರ ನಂಬರ್ ಪಡೆದು, ನಿನ್ನೆ ವಾಟ್ಸಾಪ್ನಲ್ಲಿ ಮೆಸೇಜ್ ಮಾಡಿದ್ದರು. “ನಮ್ಮ ಅತ್ತೆಗೆ ವಯಸ್ಸಾಗಿದೆ, ತುಂಬಾ ಹಿಂಸೆ ಕೊಡ್ತಾರೆ. ಏನಾದ್ರೂ ಹೇಳ್ತಿರಾ ಹೇಗೆ ಸಾಯಿಸೋದು ಅಂತ ಎಂದು ಕೇಳಿದ್ದಾಳೆ.

ಮಹಿಳೆ ಮಾತ್ರೆ ಕೇಳುವಾಗ ಈ ತರ ಮಾತ್ರೆ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿಮಾತು ಹೇಳಿದ್ದಾರೆ. ವೈದ್ಯರು ಬುದ್ಧಿ ಹೇಳುತ್ತಿದ್ದಂತೆ, ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್ನ ಬ್ಲಾಕ್ ಮಾಡಿದ್ದಾಳೆ. ಇದಕ್ಕಿಂತ ಮುಂಚೆಯೇ ಸ್ಕ್ರೀನ್ಶಾಟ್ ಪಡೆದಿದ್ದ ವೈದ್ಯ ಸುನೀಲ್ ಕುಮಾರ್ ಸಂಜಯ್ ನಗರ ಪೊಲೀಸರಿಗೆ ಮಾಹಿತಿ ನೀಡಿ, ತನಿಖೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಸದ್ಯ ಅತ್ತೆಯನ್ನು ಸಾಯಿಸಲು ಮಾತ್ರೆ ಕೇಳಿದ ಮಹಿಳೆಯ ಫೋನ್ ಸ್ವಿಚ್ಡ್ಆಫ್ ಆಗಿದ್ದು, ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ ಬಳಿಕ ಅಸಲಿ ಸತ್ಯ ಏನೆಂಬುದು ಬಯಲಾಗಲಿದೆ.









