ಚಾಮರಾಜನಗರ : ಗ್ರಾಮಸ್ಥರು EVM ಮಷಿನ್ ಒಡೆದು ಹಾಕಿದ ಘಟನೆ ಚಾಮರಾಜನಗರ ಜಿಲ್ಲೆಯ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ. ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ಚುನಾವಣೆ ಬಹಿಷ್ಕಾರಿಸಿದ್ದಾರೆ.
ಮತಗಟ್ಟೆಗಳ ಮೇಲೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಈ ಘಟನೆಯಲ್ಲಿ ಚುನಾವಣಾ ಅಧಿಕಾರಿಗಳಿಗೆ ಗಾಯಗಳಾಗಿದೆ. ಗ್ರಾಮಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.
ಗ್ರಾಮದಲ್ಲಿ ಮೂಲ ಸೌಕರ್ಯ ಇಲ್ಲದಿರುವ ಹಿನ್ನಲೆಯಲ್ಲಿ ಮತ ಬಹಿಷ್ಕಾರಕ್ಕೆ ಇಲ್ಲಿಯ ಜನತೆ ಮುಂದಾಗಿದ್ದರು. ಹಾಗಾಗಿ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ಅವರು ಮತದಾರರನ್ನು ಮನವೊಲಿಸಲು ಮುಂದಾದರು. ಈ ವೇಳೆ ಅಧಿಕಾರಿಗಳ ಒತ್ತಾಯ ಮೇರೆಗೆ ಮತದಾನ ಮಾಡಲು ಕೆಲವು ಮತದಾರರು ಮುಂದೆ ಬಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಗ್ರಾಮಸ್ಥರು ಮತಗಟ್ಟೆಗೆ ನುಗ್ಗಿ ಪೀಠೋಪಕರಣ ಹಾಗೂ EVM ಮಷಿನ್ನ್ನು ಧ್ವಂಸಗೊಳಿಸಿದ್ದಾರೆ.
ಇದನ್ನೂ ಓದಿ : ನೆಲಮಂಗಲದಲ್ಲಿ ಮತ ಚಲಾಯಿಸಿದ 100 ವರ್ಷ ದಾಟಿದ ಅಜ್ಜಿಯರು..!