ಮಂಡ್ಯ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ವತಂತ್ರವಾಗಿ ಸ್ಪರ್ಧಿಸಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಷ್ಟಪಡಿಸಿದ್ದಾರೆ. ಅದಲ್ಲದೇ ಬಿಜೆಪಿ ಸೇರುವ ಘೋಷಣೆಯನ್ನು ಕೂಡ ಇದೇ ವೇಳೆ ಮಾಡಿದರು. ಈ ಮೂಲಕ ಜೆಡಿಎಸ್ ಅಭ್ಯರ್ಥಿ ಎಚ್ಡಿ ಕುಮಾರಸ್ವಾಮಿಗೆ ಬೆಂಬಲ ನೀಡಲು ಸುಮಲತಾ ಅಂಬರೀಶ್ ಮುಂದಾಗಿದ್ದಾರೆ.
ಬಿಜೆಪಿ ಕೈಹಿಡಿದ ಸಂಸದೆ ಸುಮಲತಾ ಅವರು ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಏಪ್ರಿಲ್ 6ರಂದು ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ. ಮಂಡ್ಯದ ಬೆಂಬಲಿಗರ ಸಭೆಯಲ್ಲಿ ನಿರ್ಧಾರ ಘೋಷಿಸಿದ ಸುಮಲತಾ ಅವರು ಇದೇ ಸಂದರ್ಭ ಡಿಸಿಎಂ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ನ ಪ್ರಮುಖ ನಾಯಕರೊಬ್ಬರು ಸುಮಲತಾ ಅವರ ಅವಶ್ಯಕತೆ ನಿನ್ನೆಯೂ ಇಲ್ಲ, ಇವತ್ತಿಗೂ ಇಲ್ಲ, ನಾಳೆಯೂ ಇಲ್ಲ ಎಂದು ಹೇಳಿದ್ದಾರೆ. ಬೇಡ ಎಂದವರ ಮನೆ ಬಾಗಿಲಿಗೆ ನಾನು ಹೋಗಬಹುದೇ? ನಾನು ಮಂಡ್ಯದ ಸ್ವಾಭಿಮಾನದ ಸೊಸೆ ಎಲ್ಲಿ ಪುರಸ್ಕಾರ ಸಿಗುತ್ತೋ ಅಲ್ಲಿರೋದು ಒಳ್ಳೆಯದು ಎಂದಿದ್ದಾರೆ.
ಇನ್ನು ಮೋದಿಯವರು ಕಳೆದ ಎಲೆಕ್ಷನ್ನಲ್ಲಿ ನನಗಾಗಿ ಮತ ಕೇಳಿದ್ರು. ಇದರ ಜೊತೆಗೆ ಮಂಡ್ಯ ಕ್ಷೇತ್ರಕ್ಕೆ 4 ಸಾವಿರ ಕೋಟಿ ನೀಡಿದ್ದಾರೆ. ಮೋದಿ ಮಹಾನ್ ನಾಯಕ, ಮತ್ತೆ ಪ್ರಧಾನಿಯಾಗಬೇಕು. ಮೋದಿಯವರಿಗಾಗಿ ನಾನು ಬೆಂಬಲ ಕೊಡುವ ನಿರ್ಧಾರ ಮಾಡಿದ್ದೇನೆ. ಇಡೀ ದೇಶ ಚೆನ್ನಾಗಿದ್ರೆ ಮಂಡ್ಯ ಕೂಡ ಚೆನ್ನಾಗಿರುತ್ತೆ ಎಂದು ಸುಮಲತಾ ಹೇಳಿದ್ದಾರೆ.
ಇದನ್ನೂ ಓದಿ : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಫಲಿತಾಂಶ ಇಂದಲ್ಲ, ಮತ್ಯಾವಾಗ?