ಮಡಿಕೇರಿ : ಮಡಿಕೇರಿಯಲ್ಲಿ ಒಂದು ರಸ್ತೆ ಅಪಘಾತ ಇಬ್ಬರ ಸಾವಿಗೆ ಕಾರಣವಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಇತ್ತ ಅಪಘಾತಕ್ಕೆ ತಾನೇ ಕಾರಣವೆಂದು ಮನನೊಂದ ಮತ್ತೊಂದು ಬೈಕ್ ಸವಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗಿನ ಮಡಿಕೇರಿಯಲ್ಲಿ ನಡೆದಿದೆ.
ಕಳೆದ ಫೆಬ್ರವರಿ 9ರಂದು ಮಡಿಕೇರಿಯ ಚೈನ್ ಗೇಟ್ ಬಳಿ ಅಪಘಾತ ಸಂಭವಿಸಿತ್ತು. 24 ವರ್ಷದ ವಿದ್ಯಾರ್ಥಿ ಧನಲ್ ಸುಬ್ಬಯ್ಯ ಹಾಗೂ ಹೆಚ್.ಡಿ ತಮ್ಮಯ್ಯ ಅವರ ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿಯಾಗಿದ್ದವು. ಅಪಘಾತದಲ್ಲಿ ಧನಲ್ ಸುಬ್ಬಯ್ಯ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು.
ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಧನಲ್ ಸುಬ್ಬಯ್ಯ ಹಾಲೇರಿಯ ಕಾಂಡನಕೊಲ್ಲಿ ನಿವಾಸಿಯಾಗಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮಾಸ್ಟರ್ ಡಿಗ್ರಿ ಓದುತ್ತಿದ್ದ. ಮತ್ತೊಂದು ದ್ವಿಚಕ್ರ ವಾಹನದಲ್ಲಿದ್ದ ಹೆಚ್.ಡಿ ತಮ್ಮಯ್ಯ ಅವರು ಮಡಿಕೇರಿ ಸಮೀಪದ ಹೆರವನಾಡಿನ ನಿವಾಸಿಯಾಗಿದ್ದು, ಇವರಿಬ್ಬರ ಅಪಘಾತ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ದುರ್ಘಟನೆಯಲ್ಲಿ ಧನಲ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ. 57 ವರ್ಷದ ಹೆಚ್.ಡಿ ತಮ್ಮಯ್ಯ ಅವರು ವಿದ್ಯಾರ್ಥಿಯ ರಸ್ತೆ ಅಪಘಾತಕ್ಕೆ ನಾನೇ ಕಾರಣ ಎಂದು ಎರಡು ದಿನಗಳಿಂದ ಊಟವನ್ನೂ ಮಾಡದೇ ಕೊರಗುತ್ತಿದ್ದರು. ತೀವ್ರ ಪಶ್ಚಾತ್ತಾಪದಿಂದ ಬಳಲುತ್ತಿದ್ದ ತಮ್ಮಯ್ಯ ಕೂಡ ಇಂದು ಬೆಳಗಿನ ಜಾವ ನೇಣಿಗೆ ಕೊರಳೊಡ್ಡಿದ್ದಾನೆ.
ಇದನ್ನೂ ಓದಿ : ಅಮೃತಹಳ್ಳಿ ಠಾಣೆ ಮೇಲೆ ಮಾನವ ಹಕ್ಕು ಆಯೋಗ ದಾಳಿ ಪ್ರಕರಣ : ಇನ್ಸ್ಪೆಕ್ಟರ್ ಅಂಬರೀಶ್ಗೆ ನಾಳೆ ವಿಚಾರಣೆಗೆ ಹಾಜರಾಗಲು ಸೂಚನೆ..!