ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ, ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ದ್ವಾರಕೀಶ್ ನೇತ್ರದಾನ ಮಾಡುವ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ. ಡಾ.ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ನೇತ್ರದಾನ ಮಾಡಿದ್ದರು. ಈಗ ದ್ವಾರಕೀಶ್ ಕೂಡ ತಮ್ಮ ಸಾವಿನ ನಂತರ ಇತರರ ಬಾಳಿಗೆ ಬೆಳಕಾಗಿದ್ದಾರೆ.
ದ್ವಾರಕೀಶ್ ಕಣ್ಣನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಕುಟುಂಬದ ಸಮ್ಮತಿಯ ಮೇರೆಗೆ ಡಾ.ಶೈಲಜಾ ನೇತೃತ್ವದಲ್ಲಿ ನೇತ್ರ ಕಸಿ ಕಾರ್ಯ ನಡೆದಿದೆ. ದ್ವಾರಕೀಶ್ ಅವರ ಮರಣದ ನಂತರ ಕುಟುಂಬಸ್ಥರಿಗೆ ಕರೆ ಮಾಡಿದಾಗ 10 ನಿಮಿಷದಲ್ಲಿ ನೇತ್ರದಾನ ಮಾಡಲು ಅನುಮತಿ ನೀಡಿದ್ದಾರೆ. ಮೃತಪಟ್ಟ 14 ಘಂಟೆಯೊಳಗೆ ಕಣ್ಣು ದಾನ ಮಾಡಬಹುದು. ಸಂಪೂರ್ಣ ಕಣ್ಣುನ್ನು ಈಗಾಗಲೇ ತೆಗೆದುಕೊಂಡಿದ್ದೇವೆ ಎಂದು ವೈದ್ಯೆ ಶೈಲಜಾ ಮಾತನಾಡಿದ್ದಾರೆ.
ಇಂದು ಇಬ್ಬರಿಗೆ ದ್ವಾರಕೀಶ್ ಅವರ ಕಣ್ಣಿಂದ ಬೆಳಕು ಸಿಗಲಿದೆ. ಇಂದು ಬೆಳಗ್ಗೆ ದ್ವಾರಕೀಶ್ ಅವರ ಕಣ್ಣು ಬೇರೆಯವರಿಗೆ ಕಸಿ ಮಾಡುವ ಕೆಲಸ ಆಗುತ್ತೆ ಎಂದು ಹೇಳಿದ್ದಾರೆ. ಪಟಾಕಿಯಲ್ಲಿ ಕಣ್ಣಿಗೆ ಹಾನಿಯಾದವರಿಗೆ ಹಾಗೂ ಪೂರ್ಣ ಅಂಧತ್ವ ಇರುವವರಿಗೆ ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
11.30ರವರೆಗೆ ಅಂತಿಮ ದರ್ಶನ : ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ದ್ವಾರಕೀಶ್ ಪಾರ್ಥಿವ ಶರೀರ ಇರಿಸಲಾಗಿದ್ದು, 11:30ರವರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದರ್ಶನದ ಬಳಿಕ ಬೆಂಗಳೂರಿನ ಚಾಮರಾಜನಗರ ಟಿಆರ್ ಮಿಲ್ ಪಕ್ಕದ ಸಾರ್ವಜನಿಕ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನ ನೆರವೇರಲಿದೆ. ದುಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಮಗ ಸಂತೋಷ್ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಧಾರವಾಡದಲ್ಲಿ ಬೃಹತ್ ಐಟಿ ರೇಡ್ – ಒಂದೇ ಫ್ಲ್ಯಾಟ್ನಲ್ಲಿ ಸಂಗ್ರಹಿಸಲಾಗಿದ್ದ ಬರೋಬ್ಬರಿ 18 ಕೋಟಿ ರೂ. ಹಣ ಜಪ್ತಿ..!