ವಿಜಯಪುರ : ಮೊರಾರ್ಜಿ ವಸತಿ ಶಾಲೆಗಳಲ್ಲಿ ಕುವೆಂಪು ಘೋಷ ವಾಕ್ಯ ಬದಲಾಯಿಸಿ, ಬೇರೆಯೇ ಧ್ಯೇಯವಾಕ್ಯ ಅಳವಡಿಸಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಗ್ರಾಮದ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂಬ ಬರಹವನ್ನು ಬದಲಾಯಿಸಿ, ‘ಜ್ಞಾನ ದೇಗುಲವಿದು ದೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಯಿಸಲಾಗಿದೆ.
ಕುವೆಂಪು ಘೋಷವಾಕ್ಯ ಬದಲಿಸಿದ್ದಕ್ಕೆ ಇದೀಗ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಮಕ್ಕಳು, ಸಮಾಜದಲ್ಲಿ ಸಂಘರ್ಷ ಮೂಡಿಸೋದನ್ನು ಮಾಡಬಾರದು, ಕ್ಷೋಭೆ ಸೃಷ್ಟಿಸಿ ರೊಟ್ಟಿ ಬೇಯಿಸಿಕೊಳ್ಳೋ ಪ್ರಯತ್ನ ಇದು. ಕಾಂಗ್ರೆಸ್ ಸರ್ಕಾರದ ವಿಕೃತ ಮನಸ್ಸಿಗೆ ಇದೊಂದು ಉದಾಹರಣೆ, ಕೈಮುಗಿದು ಒಳಗೆ ಬಾ ಅನ್ನೋ ಶಬ್ಧ ಅವ್ರಿಗೆ ಕಿರಿಕಿರಿ ತಂದಿರಬಹುದು.
ಹಿಂದೂಗಳಿಗೆ ಕೈಮುಗಿಯುತ್ತಾರೆ ಎನ್ನುವ ಆತಂಕ ಸರ್ಕಾರಕ್ಕೆ ಇದೆಯೇನೋ..? ಮೊದಲು ವಸತಿ ಶಾಲೆಗಳಿಗೆ ಅಕ್ಕಿ ಸಿಗುವಂತೆ ಮಾಡಿ ಎಂದು ಮಾಜಿ ಸಿಎಂ ಬೊಮ್ಮಾಯಿ, ಕೋಟಾ ಶ್ರೀನಿವಾಸಪೂಜಾರಿ ಆಕ್ರೋಶ ಹೊರಹಾಕಿದ್ದಾರೆ. ಕುವೆಂಪು ರಚನೆಯನ್ನಾದರೂ ಬದಲಾಯಿಸುತ್ತೇವೆ ಎನ್ನುವ ನಿಲುವನ್ನು ಖಂಡಿಸುತ್ತೇವೆ, ಈ ಬಗ್ಗೆ ಸದನದಲ್ಲೂ ಹೋರಾಟ ಮಾಡುತ್ತೇವೆಂದು ಕೋಟಾ ಶ್ರೀನಿವಾಸಪೂಜಾರಿ ಹೇಳಿದ್ದಾರೆ.
ಘೋಷ ವಾಕ್ಯ ಬದಲಾವಣೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಬದಲಾವಣೆ ಯಾವಾಗಲೂ ಸಹಜ, ಸಮಾಜದ ಸ್ಥಿತಿಗತಿ ಆಧರಿಸಿ ಬದಲಾಯಿಸಿದೆ. ಯಾವ ಸಮಾಜದಲ್ಲಿ ಪ್ರಬುದ್ಧತೆ ಇರಲ್ಲ, ಆ ಸಮಾಜ ಅಭಿವೃದ್ಧಿ ಆಗಲ್ಲ. ಮಕ್ಕಳಲ್ಲಿ ಪ್ರಶ್ನೆ ಕೇಳೊ ಪ್ರವೃತ್ತಿ, ವೈಜ್ಞಾನಿಕ ಮನೋಭಾವ ಇರಬೇಕು. ಕುತೂಹಲ ಇಲ್ಲ ಅಂದ್ರೆ ಕಲಿಕೆ ಬರಲ್ಲ, ಕಲಿಕೆ ಬರಲ್ಲ ಅಂದ್ರೆ ಜ್ಞಾನ ಬರಲ್ಲ ಎಂದಿದ್ದಾರೆ.
ಹಾಗೆಯೇ, ಪ್ರಬುದ್ದ ಭಾರತ..ಪ್ರಬುದ್ದ ಸಮಾಜ ಕಟ್ಟಬೇಕು ಎಂದು ಅಂಬೇಡ್ಕರ್ ಹೇಳಿದ್ರು, ಅದು ಬೆಳೆಯಬೇಕು ಅಂದ್ರೆ ಪ್ರಶ್ನೆ ಮಾಡಲೇಬೇಕು ಅಲ್ವಾ..? ಪ್ರಶ್ನೆ ಮಾಡಿದ್ರೆ ವೈಜ್ಞಾನಿಕ ಮನೋಭಾವ ಬೆಳೆಯುತ್ತದೆ. ಜ್ಞಾನಕ್ಕೆ ನಾವು ತಲೆ ಬಾಗಲೇಬೇಕು, ಬದಲಾವಣೆಯಲ್ಲಿ ತಪ್ಪಿಲ್ಲ, ಲೈಬ್ರರಿಗಳಿಗೆ ಅರಿವು ಕೇಂದ್ರ ಬದಲಾವಣೆ ಅಂತಾ ಮಾಡಿದ್ದೇವೆ, ನಾಲೆಡ್ಜ್ ಬೇಸಡ್ ಸೊಸೈಟಿ ಕ್ರಿಯೇಟ್ ಮಾಡ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ : ವಿಶ್ವ ವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಡೇಟ್ ಫಿಕ್ಸ್..!