ಬೆಂಗಳೂರು : ಕೃಷ್ಣರಾಜ ಸಾಗರ ಡ್ಯಾಂ ಸುತ್ತಮುತ್ತ 30 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.
ಕೆಆರ್ಎಸ್ ಸುತ್ತಮುತ್ತ 30 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದು. ಕೆಆರ್ಎಸ್ ಜಲಾಶಯಕ್ಕೆ ಹಾನಿ ಮಾಡುವುದನ್ನು ತಡೆಗಟ್ಟಬೇಕಿದೆ. ಕೆಆರ್ಎಸ್ ಸುರಕ್ಷತೆ ನಮಗೆ ಮುಖ್ಯ ಎಂದು ಹೈಕೋರ್ಟ್ ಮುಖ್ಯ ನಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗಿಯ ಪೀಠ ಹೇಳಿದೆ.
ಭೂಪರಿವರ್ತನೆಗೂ ಮುನ್ನ ಪರೀಕ್ಷಾರ್ಥ ಸ್ಫೋಟ ನಡೆಸಿ ಹಾನಿ ಸಾಧ್ಯತೆ ಪರಿಗಣಿಸಿ ಅನುಮತಿಯ ಷರತ್ತು ಹಾಕಿದ್ದ ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಪ್ರಕಟಿಸಿದೆ.
ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯ 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಗಣಿ ಚಟುವಟಿಕೆಗಳನ್ನು ನಿಷೇಧಿಸುವಂತೆ ಅಣೆಕಟ್ಟು ಸುರಕ್ಷತಾ ಪುನರ್ ಪರಿಶೀಲನಾ ಸಮಿತಿ 2021ರ ಡಿಸೆಂಬರ್ನಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿತ್ತು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ನಲ್ಲಿ (ಎನ್ಐಆರ್ಎಂ- National Institute of Rock Mechanics) ಮತ್ತು ಪುಣೆಯ ಸೆಂಟ್ರಲ್ ವಾಟರ್ ಮತ್ತು ಪವರ್ ರಿಸರ್ಚ್ ಸ್ಟೇಷನ್ (ಸಿಡಬ್ಲ್ಯುಆರ್ಪಿಎಸ್- Central Water and Power Research Station) ನವರು ನಿಯಮಾನುಸಾರ ಪರಿಶೀಲನೆ ನಡೆಸಿ ವರದಿ ನೀಡುವವರೆಗೆ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿತ್ತು.
ಗಣಿ ಸ್ಫೋಟದ ಬಗ್ಗೆ ಎನ್ಐಆರ್ಎಂ ತಜ್ಞರ ತಾಂತ್ರಿಕ ಪರಿಣಿತಿ ಸಾಧಿಸಿದ್ದು, ಇವರು ನೀಡುವ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವವಿದೆ. ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಇವರ ವರದಿ ಅತಿ ಮುಖ್ಯವಾಗಿದೆ.
ಸಿಡಬ್ಲ್ಯೂ ಪಿಆರ್ಎಸ್ ಮತ್ತು ಎನ್ಐಆರ್ಎಂ ನೀಡುವ ವರದಿ ಆಧಾರದ ಮೇಲೆ ಅಣೆಕಟ್ಟೆ ಸುತ್ತ ನಡೆಯುವ ಗಣಿಗಾರಿಕೆಯಲ್ಲಿ ಸ್ಪೋಟಕಗಳನ್ನು ಯಾವ ರೀತಿ ಬಳಸಬೇಕು, ಸ್ಪೋಟದ ತೀವ್ರತೆ ಎಷ್ಟಿರಬೇಕು ಎಂಬ ಬಗ್ಗೆ ನಿಯಮಗಳನ್ನು ರೂಪಿಸಲಾಗುವುದು ಎಂದು ಅಣೆಕಟ್ಟು ಪುನರ್ ಪರಿಶೀಲನೆ ಸಮಿತಿ ವರದಿಯಲ್ಲಿ ತಿಳಿಸಿತ್ತು.
ಇದನ್ನೂ ಓದಿ : ಜೆಟ್ ಲ್ಯಾಗ್ ಪಬ್ ಕೇಸ್ ; ನಟ ದರ್ಶನ್ ಸೇರಿ ಸೆಲೆಬ್ರಿಟಿಗಳಿಗೆ ನೋಟಿಸ್..