ಸಪ್ತ ಸಾಗರದಾಚೆಗೂ ಕನ್ನಡದ ಕಂಪು.. ಅಮೆರಿಕದ ಪ್ಲೋರಿಡಾದಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ!

ಅಮೆರಿಕದ ಫ್ಲೋರಿಡಾ ರಾಜ್ಯದ ಲೇಕ್‌ಲ್ಯಾಂಡ್‌ ನಗರದಲ್ಲಿ ನಡೆಯಲಿರುವ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025ಕ್ಕೆ ಪೂರ್ಣ ಪ್ರಮಾಣದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ RP ಪಂಡಿಂಗ್ ಕನ್ವೆನ್ಸನ್ ಸೆಂಟರ್‌ನಲ್ಲಿ ಆಗಸ್ಟ್ 29ರಿಂದ 31ರವರೆಗೆ ಈ ಐತಿಹಾಸಿಕ ಸಮಾವೇಶ ನಡೆಯಲಿದೆ.‌ ಈ ಕುರಿತು ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಾವಿಕ ಅಧ್ಯಕ್ಷರಾದ ಶಿವಕುಮಾರ್, ಸಮಾವೇಶ ಸಂಚಾಲಕರಾದ ಹರ್ಷಿತ್ ಗೌಡ, ಹಿರಿಯ ನಟ ಪ್ರಣಯರಾಜ ಶ್ರೀನಾಥ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಗಾಯಕ ಅಲೋಕ್ ಬಾಬು (ಆಲ್ ಓಕೆ) ಭಾಗವಹಿಸಿ, 8ನೇ ನಾವಿಕ ಕನ್ನಡ ಸಮಾವೇಶ -2025ರ ಬಗ್ಗೆ ಮಾಹಿತಿ ಹಂಚಿಕೊಂಡರು.

ಹಿರಿಯ ನಟ ಶ್ರೀನಾಥ್‌ ಅವರು, ವಿಶ್ವದಲ್ಲಿ ಎಲ್ಲೆಲ್ಲೋ ಚದುರಿ ಹೋಗಿರುವ ಕನ್ನಡಿಗರು ಅನೇಕ ಜನ ನಾವಿಕ ವಿಶ್ವ ಕನ್ನಡ ಸಮಾವೇಶ ಬರ್ತಾರೆ. ಅಮೆರಿಕಾ ಮಾತ್ರವಲ್ಲ, ಬೇರೆ ಬೇರೆ ಕಡೆಯಿಂದ ಬರುತ್ತಾರೆ. ಅಮೆರಿಕಾದಲ್ಲಿ ಜನ ಸುಖ ಸಂತೋಷದಿಂದ ಇದ್ದಾರೆ. ಆದ್ರೆ ಅವರಲ್ಲಿ ಸೆಂಟಿಮೆಂಟ್‌ ಕೊರತೆ ಇದೆ. ಇಲ್ಲಿ ಎಲ್ಲಾ ಕೊರತೆ ಇದೆ. ಸೆಂಟಿಮೆಂಟ್‌ ತುಂಬಾ ಇದೆ. ಆ ಸೆಂಟಿಮೆಂಟ್‌ ಹೃದಯದಲ್ಲಿ ತುಂಬಿಕೊಂಡು ಇಲ್ಲಿಂದ ಅಮೆರಿಕಾಗೆ ಹೋಗಿದ್ದಾರೆ. ಈ ಸಮಾರಂಭದಲ್ಲಿ ಆ ಸೆಂಟಿಮೆಂಟ್‌ ಅನುಭವಿಸುತ್ತಾರೆ. ದೋಣಿ ನಡೆಸುವವರು ನಾವಿಕರು. ಪ್ರತಿ ವರ್ಷವೂ ನಾನು ಅಲ್ಲಿಗೆ ಬಂದಿದ್ದೇನೆ. ಚದುರಿ ಹೋಗಿರುವ ಪ್ರತಿಯೊಬ್ಬ ಕಲಾವಿದನ ಜೊತೆ ಮಾತನಾಡಬೇಕು ಎಂಬ ಆಸೆ. ಅದನ್ನು ಈ ರೀತಿ ಕಾರ್ಯಕ್ರಮಗಳ ಮೂಲಕ ಈಡೇರಿಸಿಕೊಳ್ಳುತ್ತೇವೆ. ಮೂರು ದಿನ ಅಲ್ಲಿ ಕನ್ನಡ, ಕನ್ನಡ ಕಲರವ ಇರಲಿದೆ ಎಂದು ಹೇಳಿದರು.

ಈ ಸಮಾವೇಶದಲ್ಲಿ ಬಿಸಿನೆಸ್ ಫೋರಮ್, ವುಮೆನ್ಸ್ ಫೋರಮ್ ಕವಿ ಗೋಷ್ಠಿ, ಯೂಥ್ ಫೋರಮ್, ಸಾಹಿತ್ಯ ಗೋಷ್ಠಿ ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆಯಲಿವೆ. ಈ ಸಮಾವೇಶದಲ್ಲಿ ಅನಿವಾಸಿಯರು ಮಾತ್ರವಲ್ಲದೇ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ವೈವಿದ್ಯಮಯ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಈ ಸಮಾವೇಶವ ವಿಶ್ವ ಕನ್ನಡಿಗರು ಸಂಸ್ಥೆಯು ಫ್ಲೋರಿಡಾ ರಾಜ್ಯದಲ್ಲಿರುವ ನಾಲ್ಕು ಪ್ರಮುಖ ಕನ್ನಡ ಸಂಘಗಳಾದ ಶ್ರೀಗಂಧ ಕನ್ನಡ ಕೂಟ. ಟಾಂಪ, ಒರ್ಲಾಂಡೋ ಕನ್ನಡ ಕೂಟ, ನಂದಿ ಕನ್ನಡ ಕೂಟ, ಮಯಾಮಿ, ಮತ್ತು ಸವಿಕನ್ನಡ ಕೂಟ ಜ್ಯಾಕ್ಸನ್ವೆಲ್ ಸಹಯೋಗದೊಂದಿಗೆ ಈ ಬೃಹತ್ ವಿಶ್ವ ಕನ್ನಡ ಸಮಾವೇಶವನ್ನು ಆಯೋಜಿಸುತ್ತಿದೆ. ಈ ಜಾಗತಿಕ ಸಮಾವೇಶವು ನಮ್ಮ ಭಾಷೆ, ಸಂಸ್ಕೃತಿ ಮತ್ತು ಏಕತೆಯನ್ನು ಆಚರಿಸಲು ಖಂಡಗಳಾದ್ಯಂತದ ಸಾವಿರಾರು ಕನ್ನಡಿಗರನ್ನು ಮತ್ತೊಮ್ಮೆ ಒಟ್ಟುಗೂಡಿಸುತ್ತದೆ.

ನಾವಿಕ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್ ಮತ್ತು ಸಮ್ಮೇಳನ ಸಂಚಾಲಕರಾದ ಹರ್ಷಿತ್ ಗೌಡ, ಈ ಸಾಂಸ್ಕೃತಿಕ ವೈಭವವನ್ನು ‘ಸಾರುವ ಸಮಾವೇಶವನ್ನು ಉತ್ಸಾಹ ಮತ್ತು ದೂರದೃಷ್ಟಿಯಿಂದ ಮುನ್ನಡೆಸುತ್ತಿದ್ದು, ಜನಶಕ್ತಿಯ ಉತ್ಸವವನ್ನಾಗಿ ಮಾಡಲು ಎಲ್ಲ ಕನ್ನಡಿಗರಿಗೆ ಕರೆ ನೀಡಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಅನೇಕ ಸಚಿವರನ್ನು ಈ ಸಮಾವೇಶಕ್ಕೆ ಆಹ್ವಾನಿಸಲಾಗಿದ್ದು, ಭಾಗವಹಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಕರ್ನಾಟಕ ಮತ್ತು ಅಮೆರಿಕದಾದ್ಯಂತ ಇರುವ ಪ್ರಮುಖ ಮಠಗಳ ಗೌರವಾನ್ವಿತ ಸ್ವಾಮೀಜಿಗಳನ್ನು ಸಹ ಆಶೀರ್ವದಿಸಲು ಆಹ್ವಾನಿಸಲಾಗಿದೆ. ನಟ, ನಿರ್ದೇಶಕ ಹಾಗೂ ನಿರೂಪಕ ರಮೇಶ್ ಅರವಿಂದ್, ಹಿರಿಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಶ್ರೀನಾಥ್ ಮತ್ತು ನಟ, ನಿರ್ದೇಶಕ ಹಾಗೂ ಸಾಂಸ್ಕೃತಿಕ ರಾಯಭಾರಿ ರಕ್ಷಿತ್ ಶೆಟ್ಟಿ ಈ ಸಮಾವೇಶದಲ್ಲಿ ಭಾಗವಹಿಸುವುದು ಖಚಿತವಾಗಿದೆ. ಅಲ್ಲದೆ, ಇನ್ನಷ್ಟು ಗಣ್ಯ ವ್ಯಕ್ತಿಗಳು ಈ ಮಹಾ ಕನ್ನಡ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಕರ್ನಾಟಕದ ದಸರಾ ಶೈಲಿಯ ಜಂಬೂ ಸವಾರಿಯಿಂದ ಪ್ರೇರಿತವಾದ ವರ್ಣರಂಜಿತ ಮೆರವಣಿಗೆ ನಡೆಯಲಿದೆ. ಪ್ರಪಂಚದಾದ್ಯಂತದ ಕನ್ನಡ ಕೂಟಗಳು ಕರ್ನಾಟಕ ಜಿಲ್ಲೆಗಳನ್ನು ಪ್ರತಿನಿಧಿಸಲಿವೆ. ಈ ಮೆರವಣಿಗೆಯ ಉದ್ದಕ್ಕೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಜಾನಪದ ಪ್ರದರ್ಶನಗಳು, ಸ್ತಬ್ಧ ಚಿತ್ರಗಳ ಮೂಲಕ ಸಾಂಪ್ರದಾಯಿಕ ಸ್ಮಾರಕಗಳ ಪುನರ್ನಿಮಾಣ ಹಾಗೂ ಕನ್ನಡ ಅಸ್ಮಿತೆಯನ್ನು ಪ್ರತಿಧ್ವನಿಸುವ ಧ್ವಜಗಳು ಮತ್ತು ಸಂಗೀತ ಪ್ರಕಾರಗಳು ಸಾಂಸ್ಕೃತಿಕ ವೈಭವವನ್ನು ಸಾರಲಿವೆ.

ಸಂಗೀತ ರಸ ಸಂಜೆ ಕಾರ್ಯಕ್ರಮ :

ನಾವಿಕ ಕ್ರಿಕೆಟ್ ಟೂರ್ನಮೆಂಟ್, ಆಧುನಿಕ ವಿಜ್ಞಾನ ಮತ್ತು ಕಾಲಾತೀತ ಆಧ್ಯಾತ್ಮಿಕ ಕಾರ್ಯಕ್ರಮ, ನಾಟಕ, ಕಥೆ ಹೇಳುವುದು, ಕನ್ನಡ ಸಾಹಿತ್ಯದ ಕಿರು ನಾಟಕ ಕಾರ್ಯಕ್ರಮ ಸೇರಿದಂತೆ ಸಂಗೀತ ರಸ ಸಂಜೆ ಕಾರ್ಯಕ್ರಮ ಕೂಡ ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಹಾಗೂ ಆಲ್ ಒಕೆ ಮ್ಯೂಸಿಕಲ್ ನೈಟ್ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ : ನಟ ದರ್ಶನ್​ಗೆ ಗುಡ್​ನ್ಯೂಸ್​ – ಫಾರಿನ್​ಗೆ ಹೋಗಲು ‘ದಾಸ’ನಿಗೆ ಕೋರ್ಟ್​ ಗ್ರೀನ್​ ಸಿಗ್ನಲ್!

Btv Kannada
Author: Btv Kannada

Read More