ತೆರೆಗೆ ಬರಲು ಸಜ್ಜಾದ ‘ಕಾಲೇಜ್ ಕಲಾವಿದ’ – ಚಿತ್ರದ 2 ಹಾಡಿಗೂ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌!

ಕಾಲೇಜು ಲವ್ ಸ್ಟೋರಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ, ಇದೀಗ ಸಿನಿಮಾ ಟೈಟಲ್​ನಲ್ಲಿಯೇ ಅತೀ ಹೆಚ್ಚು ಗಮನ ಸೆಳೆಯುತ್ತಿರು ಚಿತ್ರ ಅಂದ್ರೆ ಅದುವೇ ‘ಕಾಲೇಜ್ ಕಲಾವಿದ‘. ಪ್ರತಿ ಕಾಲೇಜಿನಲ್ಲೂ ಕಲಾವಿದರು ಇದ್ದೆ ಇರುತ್ತಾರೆ. ಈ ಸಿನಿಮಾ ಮೂಲಕ ಕಾಲೇಜ್​ನಲ್ಲಿ ಕಲಾವಿದ ಹೇಗೆ ಹೊರಬರಲಿದ್ದಾನೆ ಎಂಬುದನ್ನ ನೋಡಬೇಕಿದೆ. ಸದ್ಯ ರಿಲೀಸ್​ಗೆ ರೆಡಿಯಾಗಿರೋ ಈ ಸಿನಿಮಾದ ಎರಡು ಹಾಡು “ಆನಂದ್ ಆಡಿಯೋ”ನಲ್ಲಿ ರಿಲೀಸ್ ಆಗಿದ್ದು, 2 ಹಾಡಿಗೂ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ.

ನಮ್ಮ ಕನ್ನಡದ ಸ್ಪುರದ್ರೂಪಿ ನಟ ರಮೇಶ್ ಅರವಿಂದ್ ಅವರು “ಸಿಂಗಾರ ನೀನೆ” ಹಾಡನ್ನ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಹಾಡು ಸದ್ಯ ಆನಂದ್ ಆಡಿಯೋದಲ್ಲಿ ಲಭ್ಯವಿದೆ. ಕಾಲೇಜ್ ಕಲಾವಿದ ಸಿನಿಮಾದ ಹಾಡುಗಳ ಹಕ್ಕನ್ನು ಆನಂದ್ ಆಡಿಯೋ ಪಡೆದುಕೊಂಡಿದೆ. ಹಾಗೂ “ಹೊಂಟಾಯ್ತು ಹಮ್ಮೀರಾ”ಎಂಬ ಎರಡನೇ ಹಾಡನ್ನು ಭಾರತೀಯ ಚಿತ್ರರಂಗದಲ್ಲೇ ಮೊದಲನೇ ಭಾರಿಗೆ ವಿಭಿನ್ನವಾಗಿ, ಬೈಕ್ ಲಾಗರ್ಸ್ ರವರಿಂದ ಬಿಡುಗಡೆ ಮಾಡಿಸಿದ್ದು, ಮಾನ್ಸೂನ್ ಸೀಸನ್​ಗೆ ಈ ಹಾಡು ಹೇಳಿ ಮಾಡಿಸಿದ ಹಾಗಿದೆ. ಕಾಲೇಜ್ ಕಲಾವಿದ ಸಿನಿಮಾವನ್ನು “ಸಂಜಯ್ ಮಳವಳ್ಳಿ” ಬರೆದು ನಿರ್ದೇಶನ ಮಾಡಿದ್ದಾರೆ.

ಸಂಜಯ್ ಮಳವಳ್ಳಿ ಅವರು ಸಿನಿಮಾ ರಂಗದಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರಹಗಾರರಾಗಿ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವವಿದೆ. ಅಷ್ಟೇ ಅಲ್ಲದೇ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವ ಸಂಜಯ್ ಮಳವಳ್ಳಿ ಅವರದ್ದು. ಸಿಮಾಮ ಮೇಲೆ ಸಿಕ್ಕಾಪಟ್ಟೆ ಪ್ರೀತಿ. ನಿರ್ದೇಶಕನಾಗಬೇಕೆಂಬ ಕನಸು. ಇಂದಿಗೆ ಆ ಕನಸು ನನಸಾಗಿದೆ. ಸಿನಿಮಾದ ಸಾಂಗ್ ಕೂಡ ರಿಲೀಸ್ ಆಗಿದ್ದು, ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಬಂದಿದೆ. ಇದು ಇಡೀ ಚಿತ್ರತಂಡಕ್ಕೆ ಸಂತಸವನ್ನು ನೀಡಿದೆ.

ಕಾಲೇಜ್ ಕಲಾವಿದ ಸಿನಿಮಾವನ್ನು ಗಜಾನನ ಫಿಲ್ಮ್ಸ್ ಬ್ಯಾನರ್ ನಲ್ಲಿ ತರುಣ್ ಶರ್ಮಾ ನಿರ್ಮಾಣ ಮಾಡಿದ್ದು, ಆರವ್ ಸೂರ್ಯ ನಾಯಕರಾಗಿ‌ ಕಾಣಿಸಿಕೊಂಡಿದ್ದಾರೆ. ಆರವ್ ಸೂರ್ಯ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದು ಅವರ ಮೂರನೇಯ ಸಿನಿಮಾವಾಗಿದೆ. ಇದರ ಜೊತೆಗೆ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಚೈತ್ರ ಲೋಕನಾಥ್ ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಉಳಿದಂತೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಹುಲಿ ಕಾರ್ತಿಕ್ ಹಾಗೂ ಹರಿಣಿ ಶ್ರೀಕಾಂತ್ ಹಾಗೂ ರಮೇಶ್ ಭಟ್,ಶೈಲಪುತ್ರಿ ಪೋಷಕ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ.

ನಿಖೀಲ್, ನಂದಿನಿ ,ದಿನೇಶ್ ಕುಲಕರ್ಣಿ, ನವೀನ್, ನಿರಂತ್ ಸೂರ್ಯ, ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಲವ್, ಕಮರ್ಷಿಯಲ್, ತ್ರಿಲ್ಲಿಂಗ್ ಜಾನಾರ್ ಇರುವ ಈ ಚಿತ್ರಕ್ಕೆ ಆನಂದ್ ಸುಂದರೇಶ ಛಾಯಾಗ್ರಹಣ ಮಾಡಿದ್ದಾರೆ. ಮಹೇಶ್ ಗಂಗಾವತಿ ಸಂಕಲನ, ಸಂಗೀತ ನಿರ್ದೇಶಕರಾಗಿ ಸುರಾಜ್ ಜೋಯಿಸ್ ಮ್ಯಾಜಿಕ್ ಮಾಡಲಿದ್ದಾರೆ. ಹಂಚಿಕೆದಾರರಾಗಿ ಶಾಲಿನಿ ಆರ್ಟ್ಸ್ ಚಿತ್ರಕ್ಕೆ ಸಾಥ್ ನೀಡಿದೆ. ರಮೀತ್ ಏಲಕ್ಕಿ ಚಿತ್ರದ ಪ್ರಮೋಷನ್ ಅನ್ನು ಕೈಗೆತ್ತಿಕೊಂಡಿದ್ದಾರೆ.ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಕಾಲೇಜ್ ಕಲಾವಿದ ಇದೊಂದು ಪ್ರಯೋಗಾತ್ಮಕ ಪ್ರೀತಿಯ ಪಯಣದ ಕಥೆಯಾಗಿದೆ.

ಇದನ್ನೂ ಓದಿ : ಕರ್ನಾಟಕ ಸರ್ಕಾರವನ್ನು ‘ಸ್ಟುಪಿಡ್’ ಎಂದು ಸಂಸದ ತೇಜಸ್ವಿ ಸೂರ್ಯ ಬೈದಿದ್ದು ಏಕೆ?

Btv Kannada
Author: Btv Kannada

Read More