ಬೆಂಗಳೂರು : ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಗೆಲುವು ಸಾಧಿಸಿದ್ದಾರೆ. ಮತ್ತೊಬ್ಬ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭಾರೀ ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್ ವಿರುದ್ಧ ಶಾಂತಕುಮಾರ್ ಅವರು ಸ್ಪರ್ಧಿಸಿದ್ದರು.

ಬ್ರಿಜೇಶ್ ಪಟೇಲ್ ಅವರ ಬಣ ಹಾಗೂ ಅನಿಲ್ ಕುಂಬ್ಳೆಯವರ ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬ್ರಿಜೇಶ್ ಬಣದ ಪರವಾಗಿ ಶಾಂತಕುಮಾರ್ ಕಣಕ್ಕಿಳಿದ್ದರು. ಅತ್ತ, ಕೆಎಸ್ ಸಿಎ ಗೇಮ್ ಚೇಂಜರ್ಸ್ ಹೆಸರಿನ ಗುಂಪಿನಿಂದ ವೆಂಕಟೇಶ್ ಪ್ರಸಾದ್ ಅವರನ್ನು ಕಣಕ್ಕಿಳಿಸಲಾಗಿತ್ತು. ಪ್ರಸಾದ್ ಅವರಿಗೆ ಅನಿಲ್ ಕುಂಬ್ಳೆ ಹಾಗೂ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಅವರು ಬೆಂಬಲವಿತ್ತು.
ಡಿ. 7ರಂದು ನಡೆದ ಚುನಾವಣೆಯಲ್ಲಿ ಕೆಎಸ್ ಸಿಎ ಸದಸ್ಯರಾದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಅನೇಕರು ಮತ ಚಲಾಯಿಸಿದ್ದರು. ಸಂಜೆ ವೇಳೆ ನಡೆದ ಮತಎಣಿಕೆಯಲ್ಲಿ ಜಾವಗಲ್ ಶ್ರೀನಾಥ್ ಮತ್ತು ಅನಿಲ್ ಕುಂಬ್ಳೆ ಬೆಂಬಲಿತ ಅಭ್ಯರ್ಥಿ ವೆಂಕಟೇಶ್ ಪ್ರಸಾದ್ ಜಯಗಳಿಸಿದ್ದಾರೆ. ಒಟ್ಟು 20 ಸುತ್ತುಗಳ ಮತ ಎಣಿಕೆಯಲ್ಲಿ ವೆಂಕಟೇಶ್ ಪ್ರಸಾದ್ಗೆ 749 ಮತಗಳು ದೊರೆತರೆ, ಬ್ರಿಜೇಶ್ ಪಾಟೀಲ್ ಬಣದ ಶಾಂತಕುಮಾರ್ಗೆ 558 ಮತಗಳು ಲಭಿಸಿವೆ. ಇದರೊಂದಿಗೆ, ವೆಂಕಟೇಶ್ ಪ್ರಸಾದ್ ಅವರು ತಮ್ಮ ವಿರೋಧಿಯನ್ನು 191 ಮತಗಳ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ : ‘ಡೆವಿಲ್’ ನೋಡಿ ಸೆಕೆಂಡ್ ‘ಪಿಯೊಟ್’ ನೋಡಿ – ಸಿನಿಪ್ರಿಯರಿಗೆ ಚಿತ್ರತಂಡ ಮನವಿ!







