ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಯ ಸುತ್ತಲಿನ ಕದನವು ಇದೀಗ ಕ್ಲೈಮ್ಯಾಕ್ಸ್ ಘಟ್ಟ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ತುರ್ತು ಬುಲಾವ್ ನೀಡಿದೆ.

ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಗೆ ನಾಳೆ ದೆಹಲಿಗೆ ಬರುವಂತೆ ಪಕ್ಷದ ಹೈಕಮಾಂಡ್ ಕರೆ ನೀಡಿದೆ. ಪಕ್ಷದ ಉನ್ನತ ನಾಯಕರಾದ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಈ ಕುರಿತು ಸಂಧಾನ ಸಭೆ ನಡೆಯುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ಅವರೊಂದಿಗೆ ರಾಜ್ಯದ ಕೆಲವು ಪ್ರಮುಖ ಸಚಿವರು ಕೂಡ ನಾಳೆ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಈ ಮಹತ್ವದ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಆಗಬಹುದಾದ ಬದಲಾವಣೆಗಳ ದೃಷ್ಟಿಯಿಂದ ತೀವ್ರ ಕುತೂಹಲ ಕೆರಳಿಸಿವೆ. ಸದ್ಯ ಸಿಎಂ ಕುರ್ಚಿ ಕದನದ ಕುರಿತ ಇತ್ತೀಚಿನ ಬೆಳವಣಿಗೆಗಳು ಮತ್ತು ವರದಿಗಳನ್ನು ರಾಹುಲ್ ಗಾಂಧಿ ಅವರು ತರಿಸಿಕೊಂಡಿದ್ದಾರೆ.

ಶೀಘ್ರವೇ ಸೆಟಲ್ ಮಾಡ್ತೀನಿ ಎಂದ ಖರ್ಗೆ : ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಿಎಂ ಕುರ್ಚಿಯ ವಿಚಾರವಾಗಿ ಕೇಳಿಬರುತ್ತಿರುವ ವಿವಾದಗಳ ಕುರಿತು ಶೀಘ್ರದಲ್ಲೇ ಎಲ್ಲವನ್ನೂ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆಶಿ ಅವರನ್ನು ಕರೆಸಿ ಮಾತನಾಡುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ : ಮಂಡ್ಯದಲ್ಲಿ ಹೆಚ್ಚಾಯ್ತು ಬಂಡಾಯದ ಬಿಸಿ – ಕೆ.ಆರ್.ಪೇಟೆ MLA ಹೆಚ್.ಟಿ ಮಂಜು ವಿರುದ್ಧ ಭುಗಿಲೆದ್ದ ಆಕ್ರೋಶ!







