ಹೊಸಪೇಟೆ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಆಯ್ಕೆಯ ಸಂದರ್ಭದಲ್ಲಿ ಯಾವುದೇ ಅಧಿಕಾರ ಹಂಚಿಕೆ ಅಥವಾ ’50-50′ ಸೂತ್ರದ ಒಪ್ಪಂದ ಆಗಿಲ್ಲ ಎಂದು ಸಚಿವ ಕೆ.ಜೆ. ಜಾರ್ಜ್ ಅವರು ಹೊಸಪೇಟೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾವುದೇ ಒಪ್ಪಂದವಿಲ್ಲದೆ, ಶಾಸಕರ ಒಮ್ಮತದಿಂದ ಆಯ್ಕೆ ಮಾಡಲಾಗಿದೆ. “ಸಿಎಲ್ಪಿ ಸಭೆಯಲ್ಲಿ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಿದಾಗ, 50-50 ಅಂತ ಏನೂ ಚರ್ಚೆಯಾಗಿಲ್ಲ. ಎಐಸಿಸಿ ಕೂಡ ಇದ್ದರು, ಎಲ್ಲರೂ ಸಿಎಂ ಸಿದ್ದರಾಮಯ್ಯ ಎಂದೇ ಹೇಳಿದ್ದಾರೆ,” ಎಂದು ಜಾರ್ಜ್ ಹೇಳಿದ್ದಾರೆ. ಅಧಿಕಾರ ಹಂಚಿಕೆ ಅಥವಾ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಯಾವುದೇ ವಿಚಾರಗಳು ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಅವರ ರಾಜ್ಯ ಭೇಟಿ ಬಗ್ಗೆ ಜಾರ್ಜ್, ಅವರು ನಮ್ಮ ಪಕ್ಷದವರು, ಬಂದು ಹೋಗುತ್ತಾರೆ. ಪಕ್ಷದ ಹಲವು ಚರ್ಚೆಗಳನ್ನು ಮಾಡುತ್ತೇವೆ, ಇದೇ ವಿಚಾರ, ಅದೇ ವಿಚಾರ ಅಂತ ಏನಿಲ್ಲ, ಎಂದು ಹೇಳುವ ಮೂಲಕ ಭೇಟಿಯ ಕುರಿತ ಊಹಾಪೋಹಗಳನ್ನು ತಳ್ಳಿ ಹಾಕಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ವಿಚಾರಕ್ಕೆ , ಡಿಕೆಶಿ ಅವರು ನಮ್ಮ ಡಿಸಿಎಂ ಮತ್ತು ಸಹೋದ್ಯೋಗಿ. ನಾನು ನಮ್ಮ ಪಕ್ಷದ ನಾಯಕರನ್ನು ಭೇಟಿಯಾಗಿದ್ದೇನೆ. ಬರಲಿರುವ GAB ಚುನಾವಣೆಗಳು ಬರುವ ಕಾರಣ ನಾನು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ, ಎಂದು ಮಾಹಿತಿ ಹೇಳಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಲ್ಲ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಜಾರ್ಜ್ ಗರಂ ಆದರು. ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಯಾವಾಗ ಬಂದವರು? ಅವರ ತಾತ ಪ್ರಧಾನಿಯಾದವರು. ಅವರ ಪ್ರಶ್ನೆಗೆ ನಾನು ಉತ್ತರ ಕೊಡಬೇಕಾ? ನೀವು ಅವರನ್ನೇ ಕೇಳಿ, ಎಂದು ಜಾರ್ಜ್ ಹೇಳಿದ್ದಾರೆ. ಶಾಸಕರ ಖರೀದಿ ಸಂಸ್ಕೃತಿ ಕಾಂಗ್ರೆಸ್ನಲ್ಲಿ ಇಲ್ಲ. ಬಿಜೆಪಿಯವರೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಜಾರ್ಜ್ ಕಿಡಿಕಾರಿದರು.

ಇದನ್ನೂ ಓದಿ : ಕೆ. ಮಂಜು ಪುತ್ರ ಶ್ರೇಯಸ್ ಮಂಜುಗೆ ‘ಮಾರುತ’ ನೀಡಿದ ಭರ್ಜರಿ ಯಶಸ್ಸು!







