ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್ – 1200 ಚದರಡಿ ವ್ಯಾಪ್ತಿ ವಿಸ್ತೀರ್ಣದ ಕಟ್ಟಡಗಳಿಗೆ ಓಸಿ ವಿನಾಯಿತಿ.. ಡಿಕೆಶಿ ಪ್ರಯತ್ನ ಸಕ್ಸಸ್!

ಬೆಂಗಳೂರು : ಬೆಂಗಳೂರು ನಿವಾಸಿಗಳಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್ ಸಿಕ್ಕಿದೆ. ಗ್ರೇಟರ್‌ ಬೆಂಗಳೂರು ಆಡಳಿತ (GBA) ವ್ಯಾಪ್ತಿಯಲ್ಲಿ 1200 ಚದರಡಿ ವ್ಯಾಪ್ತಿಯ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (OC) ಪಡೆಯುವುದರಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ನೀಡಿದೆ.

ರಾಜ್ಯ ಸರ್ಕಾರದ ಈ ತೀರ್ಮಾನವು ಲಕ್ಷಾಂತರ ಕಟ್ಟಡ ಮಾಲೀಕರಿಗೆ ಬಿಗ್​ ರಿಲೀಫ್ ನೀಡಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಂತಾಗಿದೆ. ಸಾರ್ವಜನಿಕರಿಗೆ ನೀಡಿದ್ದ ಭರವಸೆಯಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರು GBA ವ್ಯಾಪ್ತಿಯಲ್ಲಿ 1200 ಚದರಡಿ ವ್ಯಾಪ್ತಿಯ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ OC ಪಡೆಯುವುದರಿಂದ ವಿನಾಯಿತಿ ಸಿಕ್ಕಿದೆ.

ಅ.9 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು. ಈ ನಿರ್ಧಾರದ ಅನ್ವಯ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ 1200 ಚದರ ಅಡಿ ಜಾಗದಲ್ಲಿ ನಿರ್ಮಾಣಗೊಂಡಿರುವ ನೆಲ ಮತ್ತು 2 ಅಂತಸ್ತು ಅಥವಾ ಸ್ಟಿಲ್ಟ್‌ ಮತ್ತು 3 ಅಂತಸ್ತುಗಳವರೆಗಿನ ವಸತಿ ಕಟ್ಟಡಗಳಿಗೆ ಓಸಿ ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶಿಸಿದೆ.

ಬೆಂಗಳೂರು ಒಂದರಲ್ಲೇ ಲಕ್ಷಾಂತರ ಕಟ್ಟಡಗಳಿಗೆ OC ಇದೂವರೆಗೂ ಸಿಕ್ಕಿರಲಿಲ್ಲ. ಸುಪ್ರೀಂ ಕೋರ್ಟ್​ ನೀರು, ವಿದ್ಯುತ್ ಸಂಪರ್ಕವೂ ನೀಡದಂತೆ ಆದೇಶಿಸಿತ್ತು.
OC ಇದ್ದ ಕಟ್ಟಡಗಳಿಗೆ ಮಾತ್ರ ನೀರು, ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು. OC ಇಲ್ಲದಿರೋ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡ್ತಿರಲಿಲ್ಲ. ಇದೀಗ ಸ್ವಾಧೀನ ಪತ್ರಕ್ಕೆ ವಿನಾಯಿತಿ ನೀಡಿದ್ದು ಇಂಥ ಕಟ್ಟಡಗಳಿಗೆ ಅನುಕೂಲವಾಗಿದೆ.

ಏನಿದು ಸ್ವಾಧೀನಾನುಭವ ಪತ್ರ ?

  • ಕಟ್ಟಡಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನೀಡುವ ಪತ್ರ
  • ಸ್ಥಳೀಯ ಸಂಸ್ಥೆಗಳು ನೀಡುವ ಕಾನೂನುಬದ್ಧ ದಾಖಲೆ
  • ಅನಧಿಕೃತ ಕಟ್ಟಡ, ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿಗೆ OC ನೀಡುವುದಿಲ್ಲ
  • OC ಇಲ್ಲದಿದ್ರೆ ವಿದ್ಯುತ್‌ ಮತ್ತು ನೀರು, ಒಳಚರಂಡಿ ಸಂಪರ್ಕ ಸಿಗುತ್ತಿರಲಿಲ್ಲ

ಅನುಕೂಲಗಳೇನು? :

  • ಸಣ್ಣ ನಿವೇಶನದ ಮನೆ ಮಾಲೀಕರಿಗೆ ಅನುಕೂಲ
  • ಅನುಮತಿ ಇಲ್ಲದೆ ಮನೆ ನಿರ್ಮಿಸಿದ್ದ ಮಾಲೀಕರಿಗೆ ಅನುಕೂಲ
  • ಮನೆ ಮಾರಾಟ ಅಥವಾ ಬ್ಯಾಂಕ್ ಸಾಲಕ್ಕೂ ಅನುಕೂಲ
  • ಅನಧಿಕೃತ ಕಟ್ಟಡಗಳು ಅಧಿಕೃತವಾಗುತ್ತೆ
  • ನೆಲ + 2 ಅಂತಸ್ತುಗಳು, ಅಥವಾ ಸ್ಟಿಲ್ಟ್ (parking) + 3 ಅಂತಸ್ತುಗಳು ಇರುವ ಕಟ್ಟಡಗಳಿಗೆ ಮಾತ್ರ ಅನ್ವಯ
  • ಮನೆ ಖರೀದಿಸಲು ಬಯಸುವವರಿಗೂ ಸಹಾಯ
  • OC ಇಲ್ಲದೆ ನಿರ್ಮಿಸಲಾದ ಅನೇಕ ಸಣ್ಣ ಮನೆಗಳು ಕಾನೂನು ಬದ್ಧವಾಗಬಹುದು

ಅನಾನುಕೂಲಗಳೇನು?

  • ನಿಯಮ ಉಲ್ಲಂಘನೆಯಾಗುವ ಸಾಧ್ಯತೆ
  • ಚಿಕ್ಕ ನಿವೇಶನಗಳ ಮೇಲೆ ಹೆಚ್ಚು ಅಂತಸ್ತು ಕಟ್ಟಡಗಳ ನಿರ್ಮಾಣ ಸಾಧ್ಯತೆ
  • ಗುಣಮಟ್ಟ ಇಲ್ಲದ ಕಟ್ಟಡಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಇದನ್ನೂ ಓದಿ : CDS ನಾಲೆಗೆ ಕಾರ್ಖಾನೆಯ ತ್ಯಾಜ್ಯ ನೀರು ಬಿಟ್ಟು ನಿರಾಣಿ ಶುಗರ್ಸ್ ಎಡವಟ್ಟು – ರೈತರು, ಸಾರ್ವಜನಿಕರಿಂದ ಭಾರೀ ಆಕ್ರೋಶ!

Btv Kannada
Author: Btv Kannada

Read More