ಬೆಂಗಳೂರು : ದೇವಾಲಯದಲ್ಲಿ ಬೆಳಗ್ಗೆ ಭಕ್ತಿಯಿಂದ ಪೂಜೆ ಸಲ್ಲಿಸುವ ಅರ್ಚಕರಾದರೆ, ರಾತ್ರಿ ಅದೇ ದೇವಾಲಯದ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಪ್ರವೀಣ್ ಭಟ್ ಮತ್ತು ಸಂತೋಷ್ ಜೈಲಿನಲ್ಲಿ ಆರಂಭವಾದ ತಮ್ಮ ‘ಪಾಲುದಾರಿಕೆ’ಯಿಂದ ಈ ಕೃತ್ಯವನ್ನು ಯೋಜನಾಬದ್ಧವಾಗಿ ನಡೆಸಿದ್ದಾರೆ ಎಂದು ತನಿಖೆ ವೇಳೆ ಬಯಲಾಗಿದೆ.
ಹೌದು.. ಈ ಪ್ರವೀಣ್ ಭಟ್ ಉಡುಪಿ ಮತ್ತು ಶಿವಮೊಗ್ಗದ ಪ್ರತಿಷ್ಠಿತ ದೇವಾಲಯಗಳಲ್ಲಿ ಅರ್ಚಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಬೆಳಗ್ಗೆ ದೇವರಿಗೆ ಪೂಜೆ, ಹೋಮ, ಹವನ ಮಾಡುವ ಈತ, ರಾತ್ರಿಯಾದರೆ ಸಾಕು, ಅದೇ ದೇವಾಲಯದ ಬೆಲೆಬಾಳುವ ಬೆಳ್ಳಿ ಸಾಮಗ್ರಿಗಳು, ಹಿತ್ತಾಳೆ ವಸ್ತುಗಳು ಮತ್ತು ಚಿನ್ನಾಭರಣಗಳನ್ನು ಕದ್ದು ಮಾರಾಟ ಮಾಡುತ್ತಿದ್ದ. ಅರ್ಚಕನ ಗೌರವಾನ್ವಿತ ಸ್ಥಾನದಿಂದಾಗಿ ಈ ವಸ್ತುಗಳನ್ನು ಖರೀದಿಸುವವರು ಯಾವುದೇ ಅನುಮಾನ ಪಡದೆ ಒಪ್ಪಿಕೊಳ್ಳುತ್ತಿದ್ದರು.
ಆದರೆ, ಒಂದು ದಿನ ಕಳ್ಳತನದ ಪ್ರಕರಣದಲ್ಲಿ ಸಿಕ್ಕಿಬಿದ್ದ ಪ್ರವೀಣ್ ಜೈಲು ಪಾಲಾಗಿದ್ದ. ಜೈಲಿನಲ್ಲಿ ಈತನಿಗೆ ಸಂತೋಷ್ ಎಂಬಾತನ ಪರಿಚಯವಾಗಿತ್ತು. ಇಬ್ಬರೂ ಜೈಲಿನಿಂದ ಬಿಡುಗಡೆಯಾದ ನಂತರ ಕಳ್ಳತನದ ‘ಪಾಲುದಾರಿಕೆ’ ಆರಂಭಿಸಿ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳಾದ ಬನಶಂಕರಿ ದೇವಾಲಯ ಮತ್ತು ಇತರ ಕಡೆಗಳಿಗೆ ಕನ್ನ ಹಾಕಿದ್ದಾರೆ.
ಪ್ರವೀಣ್ ಭಟ್ ಮತ್ತು ಸಂತೋಷ್ ತಮ್ಮ ಕೃತ್ಯಕ್ಕೆ ಸೂಕ್ಷ್ಮ ಯೋಜನೆ ರೂಪಿಸಿದ್ದರು. ಕದ್ದ ವಸ್ತುಗಳನ್ನು ಒಂದು ಅಂಗಡಿಯಲ್ಲಿ ಮಾರಾಟ ಮಾಡಿದರೆ ಮತ್ತೆ ಆ ಅಂಗಡಿಗೆ ಹೋಗದೆ ಬೇರೆಡೆಗೆ ತೆರಳುತ್ತಿದ್ದರು. ಇದರಿಂದ ಯಾರಿಗೂ ಅನುಮಾನ ಬಾರದಂತೆ ಎಚ್ಚರಿಕೆ ವಹಿಸಿದ್ದರು. ಆದರೆ ಬನಶಂಕರಿ ದೇವಾಲಯದ ಆಡಳಿತ ಮಂಡಳಿಯು ನಡೆಸಿದ ತಪಾಸಣೆಯಲ್ಲಿ ಇಬ್ಬರ ಕಳ್ಳತನ ಬಯಲಾಗಿತ್ತು. ದೇವಾಲಯದಿಂದ ಕದ್ದ ಸಾಮಗ್ರಿಗಳ ಬಗ್ಗೆ ದೂರು ದಾಖಲಾದಾಗ ಪೊಲೀಸರು ತನಿಖೆ ಆರಂಭಿಸಿದ್ದರು.
ಗೊಟ್ಟಿಗೇರೆ ಬಳಿಯ ಬನ್ನೇರುಘಟ್ಟ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಇಬ್ಬರೂ ಪೊಲೀಸರ ಕೈಗೆ ಸಿಕ್ಕಿಬಿದ್ದರು. ತನಿಖೆಯಲ್ಲಿ ಇವರು ಬೆಂಗಳೂರಿನ ಬನಶಂಕರಿ, ಜಯನಗರ, ಕುಮಾರಸ್ವಾಮಿ, ಜೆಪಿ ನಗರ ಸೇರಿದಂತೆ ಹಲವು ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದು ದೃಢಪಟ್ಟಿದೆ. ಒಟ್ಟು ಈ ಇಬ್ಬರಿಂದ 14 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ 11 ಪೊಲೀಸ್ ಠಾಣೆಗಳಲ್ಲಿ ಈ ಇಬ್ಬರ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ : ಎಸ್. ಪ್ರದೀಪ್ ವರ್ಮಾ ನಿರ್ದೇಶನದ 3ನೇ ಚಿತ್ರದ ಶೀರ್ಷಿಕೆ ಅನಾವರಣ.. ನಿರ್ಮಾಪಕ ಸುರೇಶ್ ಗೌಡ ಸಾಥ್!







