ಹುಬ್ಬಳ್ಳಿ : ನೇಹಾ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ನಿನ್ನೆ ಮತ್ತೊಂದು ಭೀಕರ ಕೊಲೆ ನಡೆದಿದೆ. ವೀರಾಪುರ ಓಣಿಯ 22 ವರ್ಷ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ವಿಶ್ವನಾಥ್ ಅಲಿಯಾಸ್ ಗಿರೀಶ್ ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದ. ಅಂಜಲಿ ಹತ್ಯೆ ಖಂಡಿಸಿ ಹುಬ್ಬಳ್ಳಿಯಲ್ಲಿ ನಿನ್ನೆ ಪ್ರತಿಭಟನೆಗಳೂ ನಡೆದಿದ್ದವು. ಏಮ್ಸ್ ಆಸ್ಪತ್ರೆ ಮುಂದೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬೆನ್ನಲ್ಲೇ, ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದ ಆರೋಪದ ಮೇರೆಗೆ ಬೆಂಡಿಗೇರಿ ಠಾಣೆ ಇನ್ಸ್ಪೆಕ್ಟರ್ ಮತ್ತು ಮಹಿಳಾ ಕಾನ್ಸ್ಟೇಬಲ್ ಅನ್ನು ಅಮಾನತು ಮಾಡಲಾಗಿದೆ. ಜನರ ತೀವ್ರ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರೇ ಈ ಕ್ರಮ ತೆಗೆದುಕೊಂಡಿದ್ದಾರೆ.
ತನ್ನ ಮೊಮ್ಮಗಳಿಗೆ ಜೀವ ಬೆದರಿಕೆ ಇದೆ ಎಂದು ಅಂಜಲಿ ಅಂಬಿಗೇರ ಕುಟುಂಬಸ್ಥರು ಬೆಂಡಿಗೇರಿ ಠಾಣೆಗೆ ದೂರು ನೀಡಿದ್ರು. ದೂರು ನೀಡಿದ್ರೂ ನಿರ್ಲಕ್ಷ್ಯ ತೋರಿದ ಆರೋಪ ಕೇಳಿ ಬಂದಿದ್ದು, ಇನ್ಸ್ಪೆಕ್ಟರ್ ಚಂದ್ರಶೇಖರ ಬಿ. ಚಿಕ್ಕೋಡಿ, ಕಾನ್ಸ್ಟೇಬಲ್ ರೇಖಾ ಅವರನ್ನು ಅಮಾನತು ಮಾಡಿ ರೇಣುಕಾ ಸುಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಒಂದು ವಾರದ ಹಿಂದೆಯೇ ಅಂಜಲಿಗೆ ಜೀವ ಬೆದರಿಕೆ ಹಾಕಲಾಗಿತ್ತು. ತನ್ನ ಜೊತೆ ಬರದಿದ್ರೆ ನೇಹಾ ತರ ಕೊಲೆ ಮಾಡುತ್ತೇನೆ ಎಂದು ಹಂತಕ ವಾರ್ನಿಂಗ್ ಮಾಡಿದ್ದ ಎನ್ನಲಾಗಿದೆ. ಈ ಕೂಡಲೇ ಅಂಜಲಿ ಕುಟುಂಬಸ್ಥರು ಬೆಂಡಿಗೇರಿ ಪೊಲೀಸರಿಗೆ ದೂರು ನೀಡಿದ್ರು. ಆಗ ಪೊಲೀಸ್ರು ಅಂಜಲಿ ಕುಟುಂಬಸ್ಥರಿಗೆ ಬೈದು ವಾಪಸ್ ಕಳಿಸಿ ನಿರ್ಲಕ್ಷ್ಯ ತೋರಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಕಷ್ಟ ಹೇಳಿಕೊಂಡ್ರೆ ಓವರ್ ಆ್ಯಕ್ಟಿಂಗ್ ಅಂತೀರಾ, ಸಾಧನೆ ಹೊಗಳಿದ್ರೆ ಬಕೆಟ್ ಅಂತೀರಾ : ಅನುಶ್ರೀ ಬೇಸರ..!