ಸಮಾಜ ಸೇವೆಯೇ ಜೆಡಿಎಸ್ ಸೇರ್ಪಡೆಯ ಉದ್ದೇಶ – ನಟಿ ಜಾಹ್ನವಿ ಫಸ್ಟ್ ರಿಯಾಕ್ಷನ್!

ಬೆಂಗಳೂರು : ನಿರೂಪಕಿ, ನಟಿ, ಬಿಗ್‌ ಬಾಸ್‌ ಕನ್ನಡ ಮಾಜಿ ಸ್ಪರ್ಧಿ ಜಾಹ್ನವಿ ಅವರು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಇದೀಗ ಈ ಬಗ್ಗೆ ಜಾಹ್ನವಿ ಅವರು ಬಿಟಿವಿ ಜೊತೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನನ್ನ ಆತ್ಮತೃಪ್ತಿಗಾಗಿ ನಾನು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೆ. ಹಾಗಾಗಿ ಸಮಾಜ ಸೇವೆ ಮಾಡ್ಬೇಕು ಅಂತ ನಾನು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇನೆ. ನಾನು ಸಮಾಜಕ್ಕೆ ಮಾಡಿರೋ ಸಣ್ಣ ಸೇವೆಯನ್ನು ಜೆಡಿಎಸ್​ ಗುರುತಿಸಿ ನನಗೆ ಪಕ್ಷಕ್ಕೆ ಸೇರೋ ಆಫರ್​ನ್ನು ಕೊಟ್ಟಿದೆ ಎಂದು ಜಾಹ್ನವಿ ಹೇಳಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ಎಲ್ಲರೂ ಮೆಚ್ಚುವಂತ ನಾಯಕ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 110 ಹಳ್ಳಿಗಳನ್ನು ಸೇರಿಸಿ ಬಿಬಿಎಂಪಿ ಮಾಡಿದ್ರು. ರೈತರ ಸಾಲಮನ್ನಗಳನ್ನು ಮಾಡುವಂತ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡವ್ರು ಕುಮಾರಸ್ವಾಮಿ. ಅವರ ಸಮ್ಮುಖದಲ್ಲಿ ನಾನು ಜೆಡಿಎಸ್​ಗೆ ಸೇರೋಕೆ ಬಯಸ್ತೇನೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸಮಾಜ ಸೇವೆ ಮಾಡ್ಬೇಕು ಅನ್ನೋದೆ ನನ್ನ ಗುರಿ ಎಂದಿದ್ದಾರೆ.

ಜೆಡಿಎಸ್​ ನಮ್ಮ ಪ್ರಾದೇಶಿಕ ಪಕ್ಷ, ಕನ್ನಡಿಗರ, ರೈತರ ಪಕ್ಷ. ನಮ್ಮ ದೇಶಕ್ಕೆ ಪ್ರಧಾನಮಂತ್ರಿ, ಮುಖ್ಯಮತ್ರಿಗಳನ್ನು ಕೊಟ್ಟಂತ ಪಕ್ಷ. ಜನರು ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದಾಗ ಮಾಡಿದಂತಹ ಕೆಲಸವನ್ನು ಇವತ್ತೂ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಅವರ ಕೆಲಸದಿಂದಾಗಿ ಜನರು ಮತ್ತೆ ಸಿಎಂ ಆಗಿ ಕುಮಾರಣ್ಣ ಬೇಕು ಅಂತಿದ್ದಾರೆ. ಹೆಚ್​ಡಿ ಕುಮಾರಸ್ವಾಮಿ ಅವರು ನಮ್ಮ ಸಮಸ್ಯೆಗಳನ್ನು ಹೇಳೋದಕ್ಕೆ ನಮ್ಮ ಕೈಗೆಟಕುವಂತ ನಾಯಕ. ಇನ್ನು ರಾಜಕಾರಣಕ್ಕಿಂದ ಜನರ ಅಸ್ಮಿತೆ, ಸ್ವಾಭಿಮಾನ ದೊಡ್ಡದು ಅಂತ ತೋರಿಸಿಕೊಟ್ಟವರು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ್ರು ಮತ್ತು ಕುಮಾರಣ್ಣ. ಅವರು ಸ್ವಾಭಿಮಾನ ಅಂತ ಬಂದಾಗ ಅಧಿಕಾರವನ್ನು ಬಿಡೋಕು ಸಿದ್ಧರಾಗಿದ್ದರು.

ಜೆಡಿಎಸ್ ಪಕ್ಷದಿಂದ ಆಹ್ವಾನ ಬಂತು, ಈ ಪಕ್ಷದಲ್ಲಿ ಬೇಗ ಸ್ಪಂದನೆ ಸಿಗುತ್ತೆ. ಹಾಗಾಗಿ ನಾನು ಜೆಡಿಎಸ್​ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಜೆಡಿಎಸ್ ಪಕ್ಷ ಜಿಬಿಎ ಎಲೆಕ್ಷನ್​ಗೆ ನಿಲ್ಲೋಕೆ ಹೇಳಿದ್ರೆ ನಿಲ್ತೇನೆ. ಪಕ್ಷದ ವರಿಷ್ಠರು ತೀರ್ಮಾನಕ್ಕೆ ನಾನು ಬದ್ಧನಾಗಿರ್ತೆನೆ ಎಂದು ಜಾಹ್ನವಿ ಹೇಳಿದ್ದಾರೆ.

ಇದನ್ನೂ ಓದಿ : ಕ್ರೇಜಿಸ್ಟಾರ್ ರವಿಚಂದ್ರನ್ ಜನ್ಮದಿನದಂದು ಅದ್ದೂರಿಯಾಗಿ ನೆರವೇರಲಿದೆ ‘ಕ್ರೇಜಿ – ಬ್ರಹ್ಮ’ ರೀಯೂನಿಯನ್ ಮೆಗಾ ಇವೆಂಟ್!

Btv Kannada
Author: Btv Kannada

Leave a Comment

Read More

Read More