ಪ್ರಾರ್ಥನಾ ಕ್ರಿಯೇಷನ್ಸ್ ಲಾಂಛನದಲ್ಲಿ ಕೋಟಿ ಚೆನ್ನಯ್ಯ ಖ್ಯಾತಿಯ ಡಾ. ಆರ್. ಧನರಾಜ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ “ಕೊರಗ್ಲಾ ತನಿಯಾ” (ಕೊರಗಜ್ಜ) ಮತ್ತು “ಕನ” ಚಿತ್ರಗಳ ಮುಹೂರ್ತ ಸಮಾರಂಭ ಇತ್ತೀಚೆಗೆ ಕದ್ರಿಯ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. “ಕೊರಗ್ಲಾ ತನಿಯಾ” ಚಿತ್ರದ ಪ್ರಥಮ ದೃಶ್ಯಕ್ಕೆ ಶಾಸಕ ಸಿ.ಬಿ. ಸುರೇಶ್ ಬಾಬು ಅವರು ಆರಂಭ ಫಲಕ ತೋರಿಸಿದರೆ, ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಮಖ್ಯಸ್ಥ ಎ.ಜಿ. ಶೆಟ್ಟಿ ಅವರು ಆರಂಭ ಫಲಕ ತೋರಿಸಿದರು.

ನಂತರ “ಕನ” ತುಳು ಚಿತ್ರಕ್ಕೆ ವಿಜಯಕುಮಾರ್ ಕೋಡಿಯಾಲ ಬೈಲ್ ಅವರು ಕ್ಯಾಮೆರಾ ಚಾಲನೆ ಮಾಡಿದರೆ, ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ನಟ ಸುಮನ್ ತಲ್ವಾರ್ ಅವರು ಆರಂಭ ಫಲಕ ತೋರಿಸಿದರು. ಮುಹೂರ್ತದ ನಂತರ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾ. ಆರ್. ಧನರಾಜ್ ಅವರ ಮಾತೃಶ್ರೀ ಕೆ.ಪುಷ್ಪ ಅವರು ದೀಪ ಬೆಳಗುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಪ್ರಮುಖ ಪಾತ್ರಧಾರಿ ಸುಮನ್ ತಲ್ವಾರ್ ಅವರು, 20 ವರ್ಷಗಳ ಹಿಂದೆ ಧನರಾಜ್ ಅವರು ಕೋಟಿ ಚೆನ್ನಯ್ಯ ಎಂಬ ಯಶಸ್ವೀ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರ ಅವರಿಗೆ ದೊಡ್ಡ ಹೆಸರನ್ನು ಸಹ ತಂದುಕೊಟ್ಟಿತ್ತು. ಈಗ ನಾನೂ ಸಹ ಇವರ ಚಿತ್ರದಲ್ಲಿ ಒಂದು ಮುಖ್ಯ ಪಾತ್ರವನ್ನು ಮಾಡುತ್ತಿದ್ದೇನೆ.
ಭಾಷೆ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಚಿತ್ರಗಳಿಗೆ ಸರ್ಕಾರ ಸೆಬ್ಸಿಡಿ ಮತ್ತು ತೆರಿಗೆ ವಿನಾಯಿತಿಯನ್ನು ನೀಡಬೇಕು ಎಂದು ಹೇಳಿದರು.

ನಿರ್ಮಾಪಕ, ನಿರ್ದೇಶಕ ಆರ್. ಧನರಾಜ್ ಅವರು, ನಮ್ಮ ಬ್ಯಾನರ್ ಮೂಲಕ ನಿರ್ಮಾಣವಾಗುತ್ತಿರುವ ಈ ಎರಡೂ ಚಿತ್ರಗಳು ಉತ್ತಮ ಕಥಾಹಂದರ ಹಾಗೂ ಸಂದೇಶವನ್ನು ಒಳಗೊಂಡಿದ್ದು, ಬಹುಭಾಷೆಗಳಲ್ಲಿ ಮೂಡಿಬರಲಿವೆ ಎಂದರು.

ಶಾಸಕ ಸಿ.ಬಿ. ಸುರೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಪಮ್ಮಿ ಕೊಡಿಯಾಲ್ ಬೈಲ್, ಚಿತ್ರದ ನಾಯಕಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕನ್ನಡ, ತುಳು ಸೇರಿದಂತೆ 6 ಭಾಷೆಯಲ್ಲಿ ತಯಾರಾಗುತ್ತಿರುವ “ಕೊರಗ್ಲಾ ತನಿಯಾ” ಚಿತ್ರಕ್ಕೆ ಡಾ ಆರ್. ಧನರಾಜ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವ ಜತೆ ನಿರ್ಮಾಣದ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ.
ಅರ್ಚನ ಶೆಟ್ಟಿ ಎರಡೂ ಸಿನಿಮಾಗಳ ಸಹ ನಿರ್ಮಾಪಕಿಯಾಗಿದ್ದಾರೆ. ಯುವನಟ ಸಾಜನ್ ಶೆಟ್ಟಿ, ನಿಖಿಲ್ ಇಮಾನಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ : 318 ಅಧಿಕಾರಿಗಳ ಫೈಲ್ ಮಿಸ್ಸಿಂಗ್ – ಕಡತಗಳ ಹುಡುಕಾಟಕ್ಕೆ ವಿಶೇಷ ಸಮಿತಿ ರಚನೆ!









