ಹಾವೇರಿ: ಲೋಕಾಯುಕ್ತ ಅಧಿಕಾರಿಗಳು ರಾಜ್ಯದಲ್ಲೇ ವಿಭಿನ್ನ ದಾಳಿ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಗೆ ಲಂಚ ಕೊಡಲು ಬಂದ ಕಾಂಟ್ರ್ಯಾಕ್ಟರ್ ಲೋಕಾ ಬಲೆಗೆ ಬಿದ್ದಿದ್ದಾನೆ.
ಗುರುಕೃಪಾ ಎಂಟರ್ಪ್ರೈಸಸ್ ಮಾಲೀಕ ಶರಣಪ್ಪ ಸಿದ್ದಪ್ಪ ಶೆಟ್ಟರ್ ಬಂಧಿತ ಕಾಂಟ್ರ್ಯಾಕ್ಟರ್. ಇವರ ವಿರುದ್ಧ ಹಾವೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭರತ್ ಹೆಗಡೆ ದೂರು ಕೊಟ್ಟಿದ್ದರು.
ಹಾವೇರಿ ತಾಲೂಕು ಪಂಚಾಯಿತಿಯಿಂದ ಸಾಮಗ್ರಿ ಪೂರೈಕೆಗಾಗಿ ಕರೆದ ಟೆಂಡರ್ನಲ್ಲಿ ಶರಣಪ್ಪ ಅವರು ಈ ಟೆಂಡರ್ ನನಗೇ ಸಿಗುವಂತೆ ಮಾಡಿದ್ದಲ್ಲಿ ಟೆಂಡರ್ ಮೊತ್ತದ ಶೇ. 20ರಷ್ಟು ಹಣವನ್ನು ನಿಮಗೆ ಕೊಡುತ್ತೇನೆ ಎಂದು ಒತ್ತಾಯಿಸಿ, ಲಂಚ ತೆಗೆದುಕೊಳ್ಳುವಂತೆ ಆಮಿಷ ಒಡ್ಡಿದ್ದರು ಎಂದು ತಾಪಂ ಇಒ ಭರತ್ ಹೆಗಡೆ ಲೋಕಾಯುಕ್ತರಿಗೆ ದೂರು ನೀಡಿದ್ದರು.
2 ಲಕ್ಷ ರೂ.ಮುಂಗಡವಾಗಿ ಅಧಿಕಾರಿಗೆ ನೀಡೋದಾಗಿ ಗುತ್ತಿಗೆದಾರ ಆಮಿಷವೊಡಿದ್ದನು. ಖಾಸಗಿ ಹೋಟೆಲ್ನಲ್ಲಿ 2 ಲಕ್ಷದ ಪೈಕಿ 99 ಸಾವಿರ ಹಣ ನೀಡುವ ವೇಳೆ ಲೋಕಾಯುಕ್ತ ಪೊಲೀಸರು ರೇಡ್ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ.
ಸರ್ಕಾರಿ ಅಧಿಕಾರಿ ಲಂಚ ಮುಟ್ಟದೆ, ಲಂಚ ಕೊಡುವವನನ್ನೇ ಹಿಡಿದುಕೊಟ್ಟಿದ್ದು, ಲೋಕಾಯುಕ್ತ ಪ್ರಕರಣಗಳಲ್ಲಿಯೇ ವಿರಳ ಘಟನೆಯಾಗಿದೆ. ರಿವರ್ಸ್ ಟ್ರ್ಯಾಪ್ ಮಾಡಿ ಲಂಚ ಕೊಡುವವರಿಗೂ ಲೋಕಾ ಶಾಕ್ ಕೊಟ್ಟಿದೆ.
ಇದನ್ನೂ ಓದಿ : ಮಾಲೂರು MLA ನಂಜೇಗೌಡ ಮನೆಯಲ್ಲಿ 25 ಲಕ್ಷ ವಶ..