ಕುಬೇರ್ ಕೆ. ಇಂಪೂ ನಿರ್ದೇಶನದ, ರವಿ ಕಲ್ಯಾಣ್‍ ನಾಯಕನಾಗಿ ನಟಿಸುತ್ತಿರುವ ‘ನಾರಿ’ ಚಿತ್ರಕ್ಕೆ ಅದ್ದೂರಿ ಚಾಲನೆ..!

ಕುಬೇರ್ ಕೆ. ಇಂಪೂ ನಿರ್ದೇಶನದ, ರವಿ ಕಲ್ಯಾಣ್‍ ನಾಯಕನಾಗಿ ನಟಿಸುತ್ತಿರುವ ಚಿತ್ರ

ಆರ್.ಕೆ. ಗೋಲ್ಡನ್‍ ಮೂವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುನಿರಾಜು ಮತ್ತು ರೋಜಮ್ಮ ನಿರ್ಮಿಸುತ್ತಿರುವ ‘ನಾರಿ’ ಚಿತ್ರದ ಮುಹೂರ್ತ ಸಮಾರಂಭ ಸೋಮವಾಗ ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ನೆರವೇರಿತು. ಈ ಚಿತ್ರದ ಮೂಲಕ ರವಿ ಕಲ್ಯಾಣ್‍ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದು, ಕುಬೇರ್‍ ಕೆ. ಇಂಪೂ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಸುಮಾರು 10 ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿರುವ ರವಿ ಕಲ್ಯಾಣ್‍, ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರ ತಂದೆ-ತಾಯಿ ಈ ಚಿತ್ರದ ನಿರ್ಮಾಪಕರು. ಚಿತ್ರದ ಕುರಿತು ಮಾತನಾಡುವ ಅವರು, ‘ನಾಯಕನಾಗಿ ಇದು ನನ್ನ ಮೊದಲ ಚಿತ್ರ. ಇದಕ್ಕೂ ಮೊದಲು ಸುಮಾರು 10 ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿದ್ದೇನೆ. ದರ್ಶನ್‍, ಚಿರಂಜೀವಿ ಸರ್ಜಾ, ‘ಸಂಚಾರಿ’ ವಿಜಯ್‍ ಮುಂತಾದವರ ಚಿತ್ರಗಳಲ್ಲಿ ನಟಿಸಿದ್ದೇನೆ. ಇದೊಂದು ಒಳ್ಳೆಯ ಕಥೆ. ಸಮಾಜಕ್ಕೆ ಒಂದೊಳ್ಳೆಯ ಸಂದೇಶವಿದೆ. ಒಂದು ಮನೆಗೆ ಗಂಡು ಮಗ ಎಷ್ಟು ಮುಖ್ಯ ಎಂಬುದು ಚಿತ್ರದ ಕಥೆ. ಇಲ್ಲಿ ಕಥೆಯೇ ಹೀರೋ. ನಿರ್ದೇಶಕರು ಪ್ರತೀ ಪಾತ್ರವನ್ನು ಬಹಳ ಚೆನ್ನಾಗಿ ಬರೆದಿದ್ದಾರೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ’ ಎಂದು ಹೇಳಿದರು.

ಕಳೆದ 15 ವರ್ಷಗಳಲ್ಲಿ ‘ಪದೇಪದೇ’, ‘ಅಭಿನೇತ್ರಿ’, ‘ಮಾದ ಮತ್ತು ಮಾನಸಿ’, ‘ಧರ್ಮಸ್ಯ’, ‘ಪಾದರಸ’ ಸೇರಿದಂತೆ 20 ಚಿತ್ರಗಳಿಗೆ ಕಥೆ-ಚಿತ್ರಕಥೆ ಬರೆದಿರುವ ಕುಬೇರ್‍, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ‘ನಾರಿ’ ಚಿತ್ರದ ಕುರಿತು ಮಾತನಾಡುವ ಅವರು, ‘ಒಂದು ಸಮಾಜದಲ್ಲಿ ಒಳ್ಳೆಯದ್ದನ್ನೇ ಮಾಡುವುದಕ್ಕೆ ಹೊರಟ ಒಬ್ಬ ಮನುಷ್ಯನ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ. ಸಮಾಜಕ್ಕೆ ಸದಾ ಒಳ್ಳೆಯದನ್ನೇ ಬಯಸುವ ವ್ಯಕ್ತಿಗೆ ಸಮಸ್ಯೆಗಳು ಎದುರಾದಾಗ, ಅವನು ಹೇಗೆ ಎದುರಿಸುತ್ತಾನೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವುದುಕ್ಕೆ ಹೊರಟಿದ್ದೇವೆ. ಇಲ್ಲಿ ನಾಯಕನ ಪಾತ್ರಕ್ಕೆ ಎರಡು ಶೇಡ್‍ಗಳಿವೆ. ‘ನಾರಿ’ ಎಂಬ ಶೀರ್ಷಿಕೆ ಕಥೆಗೆ ಸೂಕ್ತವಾಗಿದ್ದು, ಚಿತ್ರ ನೋಡಿದರೆ ಗೊತ್ತಾಗುತ್ತದೆ’ ಎಂದು ಹೇಳಿದರು.

ಈ ಚಿತ್ರಕ್ಕಾಗಿ ಬೆಂಗಳೂರು, ಮಂಡ್ಯ, ಮಧುರೈ ಮುಂತಾದ ಕಡೆ ಚಿತ್ರೀಕರಣ ನಡೆಸಲಾಗುತ್ತದೆ. ವಿಶೇಷವೆಂದರೆ, ‘ತಾಜ್‍ ಮಹಲ್‍’ ಚಿತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮೂವರು ಜನಪ್ರಿಯ ತಂತ್ರಜ್ಞರು, ಬಹಳ ವರ್ಷಗಳ ನಂತರ ಮತ್ತೊಮ್ಮೆ ಈ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ಛಾಯಾಗ್ರಾಹಕ ಕೆ.ಎಸ್‍. ಚಂದ್ರಶೇಖರ್‍, ಸಂಗೀತ ನಿರ್ದೇಶಕ ಅಭಿಮನ್‍ ರಾಯ್‍ ಮತ್ತು ಸಂಕಲನಕಾರ ಕೆ.ಎಂ. ಪ್ರಕಾಶ್‍ ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ವಿ. ನಾಗೇಂದ್ರ ಪ್ರಸಾದ್‍ ಮತ್ತು ‘ಬಹದ್ದೂರ್‍’ ಚೇತನ್‍ ಹಾಡುಗಳನ್ನು ರಚಿಸುತ್ತಿದ್ದಾರೆ.

ರವಿ ಕಲ್ಯಾಣ್‍ಗೆ ನಾಯಕಿಯಾಗಿ ಪ್ರಿಯಾ ಹೆಗ್ಡೆ ಅಭಿನಯಿಸುತ್ತಿದ್ದು, ‘ಡ್ರ್ಯಾಗನ್‍’ ಮಂಜು ಖಳನಟನಾಗಿ ಅಬ್ಬರಿಸಲಿದ್ದಾರೆ. ಮಿಕ್ಕಂತೆ ಮಾನಸಿ ಸುಧೀರ್‍, ‘ಜಾಲಿ ಜಾಲಿ’ ಜಾಕ್‍, ಮಹಾನಿಧಿ ಸಾಯಿ ತೇಜ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Btv Kannada
Author: Btv Kannada

Leave a Comment

Read More

Read More