ಬೆಂಗಳೂರು : ಕಾಡುಗೋಡಿ ಮಗು ವೆನ್ನಿಲಾ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಮೂವರು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಕಾಡುಗೋಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಂಗಸ್ವಾಮಿ, ಪಿಎಸ್ಐ ನಿಂಗರಾಜು ಹಾಗೂ ಐಒ ಅಸಿಸ್ಟೆಂಟ್ ಅನ್ನು ಅಮಾನತು ಮಾಡಿದ್ದಾರೆ. ರಮೇಶ್ ಬಾನೋತ್ ವರದಿ ಮೇರೆಗೆ ಮೂವರು ಪೊಲೀಸರನ್ನು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸಸ್ಪೆಂಡ್ ಮಾಡಿದ್ದಾರೆ.
ಇನ್ನು ಪ್ರಿಯಕರನೊಂದಿಗೆ ತನ್ನ ಐದೂವರೆ ವರ್ಷದ ಮಗಳು ವೆನ್ನಿಲಾಳನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಿಯಾಂಕಾ, ಎಫ್ಐಆರ್ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದಳು. ಆದರೆ, ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಮಾರ್ಚ್ 24ರಂದು ಕಾಡುಗೋಡಿಯ ವಿಲ್ಲಾದಲ್ಲಿ ಬಾಲಕಿ ವೆನ್ನಿಲಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಆರಂಭದಲ್ಲಿ ಇದನ್ನು ಅಸಹಜ ಸಾವು ಎಂದು ಪೊಲೀಸರು ದಾಖಲಿಸಿಕೊಂಡಿದ್ದರು. ಆದರೆ, ಬಳಿಕ ವೆನ್ನಿಲಾ ತಾಯಿ ಪ್ರಿಯಾಂಕಾಳ ಪ್ರಿಯಕರ ಮೋಹನ್ ಬಾಲಕಿಯನ್ನು ಕೊಲೆ ಮಾಡಿದ್ದ ಎಂದು ತನಿಖೆ ಮೂಲಕ ತಿಳಿಯಿತು. ಪ್ರಿಯಾಂಕಾ ಶಾಪಿಂಗ್ ಹೋದ ವೇಳೆ ಕಾರಿನಲ್ಲಿದ್ದ ಬಾಲಕಿ ಐಸ್ಕ್ರೀಮ್ ಬೇಕೆಂದು ಹಠ ಮಾಡಿದ್ದಕ್ಕೆ ಸಿಟ್ಟಾಗಿ ಆಕೆಯ ಹೊಟ್ಟೆಗೆ ಒದ್ದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಮೋಹನ್ ವಿಚಾರಣೆ ವೇಳೆ ಮಗುವಿನ ಮೇಲೆ ಹಲ್ಲೆ ನಡೆಸಿದ ಬಗ್ಗೆ ತಪ್ಪೊಪ್ಪಿಗೆ ನೀಡಿದ್ದ. ಆತನ ಹೇಳಿಕೆ ಆಧಾರದ ಮೇಲೆ ಈಗ ಆರೋಪಿ ಪ್ರಿಯಾಂಕಾಳನ್ನು ಸಹ ಬಂಧಿಸಲಾಗಿದೆ.
ಇದನ್ನೂ ಓದಿ : ಮಾಲೂರಿನ 80 ಕೋಟಿ ಮೌಲ್ಯದ ಸರ್ಕಾರಿ ಭೂ ಹಗರಣಕ್ಕೆ ಬಿಗ್ ಟ್ವಿಸ್ಟ್ – ತಹಶೀಲ್ದಾರ್ ವಿರುದ್ಧ ವಿಡಿಯೋ ಹರಿಬಿಟ್ಟ SDA!









