ಬೆಂಗಳೂರು : ಡಿ. ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಪುನಾರಚನೆಯ ಕಸರತ್ತು ಜೋರಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಯತ್ತ ದೌಡಾಯಿಸುತ್ತಿದ್ದಾರೆ. ದೆಹಲಿಗೆ ಹೋಗುವ ಮುನ್ನ ಎನ್. ಎ. ಹ್ಯಾರಿಸ್ ಅವರು ಜಮೀರ್ ಅಹ್ಮದ್ ಆಡಿಯೋ ವಿಚಾರವಾಗಿ ಕಿಡಿ ಕಾರಿದ್ದಾರೆ.
ದಾವಣಗೆರೆಯದ್ದು ಮುಗಿತಲ್ಲಾ, ಬೇಕು ಅಂತಾ ಬೇಕಾದ ಸಮಯದಲ್ಲಿ ಮಾಡುವುದು ಗಲೀಜು ರಾಜಕೀಯ. ಅವಾಗ್ಲೆ ಹೇಳಿದಿದ್ರೆ ಮೆಚ್ಚಬಹುದಿತ್ತು, ಸಮಯ ಸಂದರ್ಭ ನೋಡಿ ಒಬ್ಬರನ್ನು ಹಾಳು ಮಾಡಬೇಕು ಎಂದು ಈ ರೀತಿ ಮಾಡುವುದು ಒಳ್ಳೆಯ ರಾಜಕೀಯ ಅಲ್ಲ ಎಂದು ಎನ್. ಎ. ಹ್ಯಾರಿಸ್ ಹೇಳಿದ್ದಾರೆ.
ಯಾರೂ ದೊಡ್ಡೋರು ಚಿಕ್ಕೋರು ಅಂತ ಹೇಳಲಿಕ್ಕೆ ಆಗಲ್ಲ, ಯಾವುದೂ ನೀಚ ರಾಜಕೀಯ ಮಾಡೋದಿಕ್ಕೆ ಹೋಗಬಾರದು. ಇದು ಪರ್ಮನೆಂಟೂ ಅಲ್ಲ, ಇದೆಲ್ಲಾ ಟೆಂಪರವರಿ. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡೋದು ನೋಡಬೇಕು ಎಂದಿದ್ದಾರೆ.
ಇದೇ ವೇಳೆ ಸಚಿವ ಸ್ಥಾನದ ಬಗ್ಗೆ ಮಾತನಾಡಿ, 18 ವರ್ಷದಿಂದ ನಾನು 4 ಬಾರಿ ಶಾಸಕನಾಗಿದ್ದೀನಿ. ಪಕ್ಷ ಹಾಗೂ ಸರಕಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೀನಿ ದುಡಿದಿದ್ದೀನಿ, ಸಚಿವ ಸ್ಥಾನ ಕೊಡ್ತಾರೆ ಎಂಬ ನಂಬಿಕೆ ನನಗಿದೆ. ಅಂತಿಮವಾಗಿ ಹೈಕಮಾಂಡ್ ಹೇಳಬೇಕು, ಸಚಿವನಾಗಬೇಕು ಎಂಬ ಅಸೆ ನನಗೂ ಇದೆ. ಈಗ ಒಳ್ಳೆಯದಾಗಿದೆ ಡಿ.ಕೆ ಶಿವಕುಮಾರ್ ರವರು ಸಿಎಂ ಆಗ್ತಿದ್ದಾರೆ. ನನಗೆ ಬಹಳ ಸಂತೋಷ ತಂದಿದೆ ಎಂದರು.
ಸಚಿವ ಸಂಪುಟ ಬದಲಾವಣೆ ಆಗಲೇಬೇಕು ಎಲ್ಲರಿಗೂ ಅವಕಾಶ ಸಿಗಬೇಕು. ಎರಡೂವರೆ ವರ್ಷ ಅದ ಮೇಲೆ ಬಿಟ್ಕೊಡ್ತೀವಿ ಅಂತ ಹೇಳಿದ್ರು. ಈಗ ಅದು ಕಾರ್ಯ ರೂಪಕ್ಕೆ ಬರಬೇಕು ಎಂದು ಎನ್. ಎ. ಹ್ಯಾರಿಸ್ ಹೇಳಿದ್ದಾರೆ.
ಇದನ್ನೂ ಓದಿ : ಒಕ್ಕಲಿಗರ ಸಂಘದಲ್ಲಿ ಭಾರೀ ಅಕ್ರಮ – ಕೂಡಲೇ ವಿಸರ್ಜಿಸಲು ಜಂಟಿ ರಿಜಿಸ್ಟರ್ಗೆ ಸಾವಿರಾರು ಸದಸ್ಯರ ದೂರು!








