ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಇಂದು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ಸಿದ್ದರಾಮಯ್ಯನವರ ರಾಜೀನಾಮೆಗೆ ಮಾಜಿ ಸಚಿವ ಬಿ.ಸಿ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬಿ.ಸಿ ಪಾಟೀಲ್ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಸಿಎಂ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ಮತ್ತು ವಿದಾಯ ಎಲ್ಲೋ ಒಂದು ಕಡೆ ನನಗೆ ಗೊತ್ತಿಲ್ಲದೆ ನೋವನ್ನ ಕೊಡ್ತಾ ಇದೆ. ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು ಆದರೆ ಅವರೊಂದಿಗೆ ಒಡನಾಟ ಮರೆಯುವಂತದ್ದಲ್ಲ ಎಂದಿದ್ದಾರೆ.

ನಾನು ಅವರನ್ನು ಪೊಲೀಸ್ ಅಧಿಕಾರಿಯಾಗಿ ನೋಡಿದ್ದೇನೆ. 2004 ರಿಂದ ಅವರೊಂದಿಗೆ ಶಾಸಕನಾಗಿ ಕೂಡ ಅವರೊಂದಿಗಿದ್ದೆ, 2006ರಲ್ಲಿ ಅವರು ಕಾಂಗ್ರೆಸ್ಸಿಗೆ ಹೋಗಿ ಚುನಾವಣೆಗೆ ಸ್ಪರ್ಧಿಸಿದಾಗ ನಾನು ವಿರೋಧಿಸಿದ್ದು ಇದೆ. ಆದರೆ ನಾನು 2008ರಲ್ಲಿ ಕಾಂಗ್ರೆಸಿಗೆ ಬಂದ ಮೇಲೆ ಅದಾವುದನ್ನು ಅವರು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನನ್ನ ಎಲ್ಲ ಚುನಾವಣೆಗಳಲ್ಲಿಯೂ ಅವರು ನನಗೆ ಸಹಾಯ ಮಾಡಿದ್ದಾರೆ ನನ್ನನ್ನು ಅತ್ಯಂತ ಹತ್ತಿರದಿಂದ ಬಿಸಿ ಎಂದೆ ಕರೆಯುತ್ತಿದ್ದರು. 2013ರಲ್ಲಿ ನಾನು ಸೋತಾಗ ನನಗೆ ನನ್ನ ಕ್ಷೇತ್ರಕ್ಕೆ ನಾಲ್ಕು ನೀರಾವರಿ ಯೋಜನೆಗಳನ್ನು ನೀಡಿದ್ದಾರೆ ನಾನು ಎಂದಿಗೂ ಅದನ್ನು ಮರೆತಿಲ್ಲ ನನ್ನ ಕ್ಷೇತ್ರದ ಜನ ಕೂಡ ಎಂದು ಅದನ್ನು ಮರೆಯುವುದಿಲ್ಲ ಎಂದು ಬಿ.ಸಿ ಪಾಟೀಲ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸಿದ್ದರಾಮಯ್ಯನವರ ಗತ್ತು ಮತ್ತು ಗಾಂಭೀರ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತಂದು ಕೊಟ್ಟಿತ್ತು. ಅಧಿಕಾರ ಶಾಶ್ವತವಲ್ಲ ಅವರು ಅಧಿಕಾರ ಬಿಟ್ಟು ಇಳಿದಾಗ ನನಗೆ ನೋವುಂಟಾಗಿದೆ. ನನಗೆ ಅವರ ಬಗ್ಗೆ ಇದ್ದಂತಹ ಗೌರವ ಮತ್ತು ಪ್ರೀತಿ. ನನ್ನ ಮನೆಗೆ ಎಷ್ಟು ಬಾರಿ ಬಂದಿದ್ದಾರೋ ಗೊತ್ತಿಲ್ಲ ಕರೆದಾಗಲೆಲ್ಲ ಬರ್ತಾ ಇದ್ರು ಪ್ರೀತಿ ಹಂಚಿಕೊಳ್ತಾ ಇದ್ರು. ಅವರು ಮುಖ್ಯಮಂತ್ರಿಯಾದ ಮೇಲೆ 2023 ರ ನಂತರ ಹೋಗಿ ಭೇಟಿಯಾಗಲಿಲ್ಲ. ಒಂದು ಬಾರಿ ದೆಹಲಿಯಲ್ಲಿ ಭೇಟಿಯಾದಾಗ ನನ್ನ ಅತ್ಯಂತ ಪ್ರೀತಿ ವಿಶ್ವಾಸದಿಂದ ಮಾತನಾಡಿ ನನಗೆ ಬೆನ್ನು ತಟ್ಟಿದರು ಎಂದಿದ್ದಾರೆ.
ಸಿದ್ದರಾಮಯ್ಯ ಒಬ್ಬ ಇತಿಹಾಸಕಾರ ಅರ್ಥಶಾಸ್ತ್ರಜ್ಞ ಚಾಣಾಕ್ಷ ಹೃದಯವಂತ ನೇರ ನಿಷ್ಠುರನುಡಿಗೆ ಹೆಸರಾದವರು. ಇಂದು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭಗವಂತ ಅವರಿಗೆ ಆಯುರಾರೋಗ್ಯ ಭಾಗ್ಯವನ್ನು ಕೊಡಲಿ ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ನೀಡಿ ಯುವಕರಿಗೆ ಮಾರ್ಗದರ್ಶನ ನೀಡಲಿ ಎಂದು ಬಿ.ಸಿ ಪಾಟೀಲ್ ಸಿದ್ದರಾಮಯ್ಯರನ್ನು ಹೊಗಳಿದ್ದಾರೆ.
ಇದನ್ನೂ ಓದಿ : ಹೈಕಮಾಂಡ್ ಸೂಚನೆಯಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ – ಸಿದ್ದರಾಮಯ್ಯ!








