ಶುರುವಾಗ್ತಿದೆ ತಾಯಿಗಾಗಿ ಬ್ರಹ್ಮಚರ್ಯವನ್ನು ಪಾಲಿಸುತ್ತಿರೋ ಪೈಲ್ವಾನನ ಪ್ರೀತಿಯ ಕಥೆ “ಮರ್ಯಾದೆ ರಾಮಣ್ಣ”!

ಕನ್ನಡ ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ವಿನೂತನ ರೀತಿಯ ಮನಮುಟ್ಟುವ ಧಾರಾವಾಹಿಗಳನ್ನು ನೀಡುತ್ತಲೇ ಬರುತ್ತಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಚ್ಚ ಹೊಸ ಕಥೆ “ಮರ್ಯಾದೆ ರಾಮಣ್ಣ”.

ಅಖಾಡಕ್ಕೆ ಇಳಿದ್ರೆ ಯಾರಿಗೂ ಜಗ್ಗದ ಮಲ್ಲಿಗೆಪುರದ ಪೈಲ್ವಾನ ನಮ್ ಕಥಾನಾಯಕ ರಾಮಣ್ಣ. ಮಾತೃವಾಕ್ಯ ಪರಿಪಾಲಕನಾಗಿರೋ ಈತ ಆಕಾಶವೇ ತಲೆ ಮೇಲೆ ಬಿದ್ರೂ ಅಮ್ಮನ ಮಾತು ಮೀರೋದಿಲ್ಲ ಅನ್ನೋ ಹಳ್ಳಿ ಹೈದ. ತೊಡೆ ತಟ್ಟಿ ಕುಸ್ತಿ ಗೆಲ್ಲೊ ಇವನು ಅಮ್ಮ ಜಯಮ್ಮನ ಮಾತಿಗೆ ಕಟ್ಟು ಬಿದ್ದು ಬ್ರಹ್ಮಚಾರಿಯಾಗಿ ಉಳಿದಿದ್ದಾನೆ. ಜಯಮ್ಮನ ಮರ್ಯಾದೆಗೆ ಕಿಂಚಿತ್ತೂ ಕುತ್ತು ಬರದಂತೆ ಕಾಯೋ ಮುದ್ದಿನ ಮಗ ಈ ಮರ್ಯಾದೆ ರಾಮಣ್ಣ.

ಇನ್ನು ಶ್ರೀಮಂತಿಕೆಯಲ್ಲಿ ಬೆಳೆದಿರೋ ಅಪ್ಸರೆಯಂಥಾ ಹುಡ್ಗಿ ನಮ್ ಕಥಾನಾಯಕಿ ಐಶ್ವರ್ಯ. ತನ್ನ ಮಾತನ್ನೇ ಎಲ್ರೂ ಕೇಳುವಂತೆ ಮಾಡೋ ಅಪ್ಪನ ಮುದ್ದಿನ ಮಗಳು. ತಾನು ಸ್ವಂತ ಕಾಲಿನ ಮೇಲೆ ನಿಂತು, ಫಾರಿನ್ನಿಗೆ ಹೋಗಿ ಸೆಟ್ಲು ಆಗೋದನ್ನೇ ಲೈಫು ಅನ್ಕೊಂಡಿರೋ ಪ್ಯಾಟೆ ಹುಡ್ಗಿ. ಈಕೆ ನೋಡೋಕೆ ಮುದ್ದು, ಆದರೆ ಸಿಡಿಮದ್ದು.

ಮದ್ವೆನೇ ಆಗಲ್ಲ ಅನ್ನೋ ಬ್ರಹ್ಮಚಾರಿ ರಾಮಣ್ಣನ ಜೀವ್ನಕ್ಕೆ ಸುಂಟರಗಾಳಿ ಥರ ಇರೋ ಐಶ್ವರ್ಯ ಬಂದ್ರೆ ಮುಂದೇನಾಗುತ್ತೆ? ಅಮ್ಮನಿಗೆ ಕೊಟ್ಟಿರೋ ಮಾತನ್ನು ರಾಮಣ್ಣ ಹೇಗೆ ನಿಭಾಯಿಸ್ತಾನೆ? ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಇನ್ನು ಈ ಸೀರಿಯಲ್ ಅದ್ಭುತ ತಾರಾಬಳಗವನ್ನು ಹೊಂದಿದ್ದು ನಾಯಕನಾಗಿ ಚೇತನ್ ಚಂದ್ರ, ನಾಯಕಿಯಾಗಿ ಜೀವಿತಾ ವಸಿಷ್ಠ ನಟಿಸುತ್ತಿದ್ದಾರೆ. ಜೊತೆಗೆ ವೀಣಾಸುಂದರ್, ಸುಂದರ್, ವಿದ್ಯಾ ಮೂರ್ತಿ, ಶ್ರೀಕಾಂತ್ ಹೆಬ್ಳಿಕರ್, ಸೌಮ್ಯಲತ, ವಿಠ್ಠಲ್ ಕಾಮತ್, ಯದು ಗಿರೀಶ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ.

ಶುರುವಾಗ್ತಿದೆ ತಾಯಿಗಾಗಿ ಬ್ರಹ್ಮಚರ್ಯವನ್ನು ಪಾಲಿಸುತ್ತಿರೋ ಪೈಲ್ವಾನನ ಪ್ರೀತಿಯ ಕಥೆ “ಮರ್ಯಾದೆ ರಾಮಣ್ಣ” ಇದೇ ಮೇ 25 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ಹಾಗೂ JioHotstar ನಲ್ಲಿ ತಪ್ಪದೇ ವೀಕ್ಷಿಸಿ.

ಇದನ್ನೂ ಓದಿ : ಶತದಿನೋತ್ಸವ ಸಂಭ್ರಮದಲ್ಲಿ “ಮಗ್ಗಿಪುಸ್ತಕ” ಚಿತ್ರತಂಡ – ಈ ವರ್ಷ 100 ದಿನ ಪೂರೈಸಿದ ಮೊದಲ ಸಿನಿಮಾ!

Btv Kannada
Author: Btv Kannada

Leave a Comment

Read More

Read More