ಹರಿವರಾಸನಂ ಅವರ ಅವನಿ ಎಂಬ ಕಾದಂಬರಿಯನ್ನಾಧರಿಸಿ ನಿರ್ಮಾಣವಾದ ಚಿತ್ರ ಮಗ್ಗಿಪುಸ್ತಕ ಇದೀಗ ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿದೆ. ಈ ವರ್ಷ 100 ದಿನ ಪ್ರದರ್ಶನಗೊಂಡ ಮೊದಲ ಮಕ್ಕಳ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರದ್ದು. ಈ ನೂರರ ಸಂಭ್ರಮಾಚರಣೆಯ ಸಮಾರಂಭವನ್ನು ಚಿತ್ರ ಪ್ರದರ್ಶನ ನಡೆಯುತ್ತಿರುವ ಭೂಮಿಕಾ ಥಿಯೇಟರ್ನಲ್ಲೇ ಆಚರಿಸಲಾಯಿತು. ಈ ಸಂದರ್ಭದಲ್ಲಿ ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದ, ತಂತ್ರಜ್ಞರೆಲ್ಲರಿಗೂ ಸ್ಮರಣ ಫಲಕ ವಿತರಿಸಲಾಯಿತು.

ಹರಿವರಾಸನಂ ಅವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ ಚಿತ್ರ ಮಗ್ಗಿ ಪುಸ್ತಕ ಚಿತ್ರವನ್ನು ಚಿನ್ನಸ್ವಾಮಿ ಫಿಲಂಸ್ ಅಡಿಯಲ್ಲಿ ಚಿನ್ನಸ್ವಾಮಿ ಎತಿರಾಜ್ ಅವರು ನಿರ್ಮಿಸಿದ್ದಾರೆ. ರಾಜಶೇಖರ್ ದಾವಣಗೆರೆ, ಈಶ್ವರಿ ಮಂಜು, ನಾಗವೇಣಿ, ಡಾ.ಲಲಿತಾರಾವ್, ಸುನಿಗೌಡ ಕನಕಪುರ, ನವೀನ್ ಗೌಡ, ಶಶಿಕಾಂತ್ ವರದಹಳ್ಳಿ, ಎಂ. ಮಹೇಶ್ ಕೆ.ನಟರಾಜ್, ಎನ್. ನಾಗರಾಜ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ವೇದಿಕೆಯಲ್ಲಿ ಹಾಜರಿದ್ದ ಇವರೆಲ್ಲ ನಿರ್ದೇಶಕರ ಪ್ರಾಮಾಣಿಕ ಪ್ರಯತ್ನದ ಫಲವಾಗಿಯೇ ಈ ಯಶಸ್ಸು ಸಾಧ್ಯವಾಯಿತು ಎಂದು ಹೇಳಿದರು.
ನಿರ್ಮಾಪಕ ಚಿನ್ನಸ್ವಾಮಿ ಎತಿರಾಜ್ ಅವರು, ಇವತ್ತಿನ ದಿನಗಳಲ್ಲಿ ಕನ್ನಡ ಚಿತ್ರವೊಂದು ನೂರು ದಿನ ಓಡಿದೆ ಎಂದರೆ ನಿಜಕ್ಕೂ ಅದೊಂದು ಮಿರಾಕಲ್. ಈ ಯಶಸ್ಸಿಗೆ ನಿರ್ದೇಶಕರ ನಿರಂತರ ಎಫರ್ಟ್ ಕಾರಣ. ಅವರಿಂದಲೇ ಇವತ್ತು ನಾವೆಲ್ಲ ಈ ವೇದಿಕೆಯಲ್ಲಿ ನಿಂತಿದ್ದೇವೆ. ತುಂಬಾ ಸಂತಸವಾಗ್ತಿದೆ. ಈ ಯಶಸ್ಸಿಗೆ ಸಹಕರಿಸಿದ ಎಲ್ಲ ತಂತ್ರಜ್ಞರು, ಕಲಾವಿದರಿಗೆ ನನ್ನ ಕೃತಜ್ಞತೆಗಳು ಎಂದರು.

ಪ್ರೇಕ್ಷಕರು, ಚಿತ್ರತಂಡ ನೀಡಿದ ಸಹಕಾರ ಬೆಂಬಲದಿಂದಲೇ ಇವತ್ತು ನಮ್ಮ ಚಿತ್ರ ಗೆದ್ದಿದೆ ಎಂದು ನಿರ್ದೇಶಕ ಹರಿವರಾಸನಂ ಹೇಳಿದರು.
ಪ್ರಮುಖ ಪಾತ್ರ ಮಾಡಿದ ಹಿರಿಯ ಪೋಷಕ ಕಲಾವಿದೆ ಪಂಕಜಾ ಅವರು, ಇವತ್ತು ನವರತ್ನಗಳ ಹಾಗೆ ಒಂಬತ್ತು ಜನ ನಿರ್ಮಾಪಕರು ಸೇರಿ ಒಂದೊಳ್ಳೆ ಸಿನಿಮಾ ಕೊಟ್ಟಿದ್ದಾರೆ. ನಿರ್ದೇಶಕರು ಮೊಬೈಲ್ ನಲ್ಲಿ ಮಕ್ಕಳು ಏನೇನು ಮಾಡುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಈ ಚಿತ್ರಕ್ಕೆ ರಾಜ್ಯಪ್ರಶಸ್ತಿ ಬರಬೇಕು ಎಂದು ಹೇಳಿದರು.
ಬಡ ಕುಟುಂಬದ ಅವನಿ ಎಂಬ ಹೆಣ್ಣು ಮಗಳ ಸುತ್ತ ನಡೆಯುವ ಕಥೆಯಿದು. 4 ಆಯಾಮಗಳಲ್ಲಿ ನಡೆಯುವ ಕಥೆ ಒಳಗೊಂಡ ಈ ಚಿತ್ರದಲ್ಲಿ ಮಕ್ಕಳ ಜತೆಗೆ ಪೋಷಕರಿಗೂ ಉತ್ತಮ ಸಂದೇಶವಿದೆ. ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯ
ವಿದ್ಯಾರ್ಥಿಗಳು, ಪೋಷಕರು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.

ಮಗ್ಗಿ ಪುಸ್ತಕವೆಂಬುದು ಬದುಕಿನ ಲೆಕ್ಕಾಚಾರವಾಗಿದ್ದು, ಜೀವನವೇ ಒಂದು ಮಗ್ಗಿ ಪುಸ್ತಕವಿದ್ದಂತೆ, ಇದರಲ್ಲಿ ಒಳ್ಳೆಯದನ್ನು ಕೂಡಬೇಕು, ಕೆಟ್ಟದ್ದನ್ನು ಕಳೆಯಬೇಕು, ಅಜ್ಞಾನವನ್ನು ಗುಣಿಸಬೇಕು, ಜ್ಞಾನವನ್ನು ಭಾಗಿಸಬೇಕು ಎಂಬ ಸಂದೇಶವಿದೆ, ನಾಲ್ಕು ಆಯಾಮಗಳಲ್ಲಿ ನಡೆಯುವ ಹೈಪರ್ ಲಿಂಕ್ ಕಥೆಯಿದು.
ಈ ಚಿತ್ರಕ್ಕೆ ಯಶಸ್ ನಾಚಪ್ಪ ಅವರ ಸಂಗೀತ ನಿರ್ದೇಶನ, ನಂದಕುಮಾರ್ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ7 ಹಾಡುಗಳಿದ್ದು, ಎಂ.ಎಂ.ಕೀರವಾಣಿ ಅವರು ಹಾಡೊಂದಕ್ಕೆ ದನಿಯಾಗಿರುವುದು ವಿಶೇಷ. ಉಳಿದಂತೆ ಕನ್ನಡ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್, ಕಂಭದ ರಂಗಯ್ಯ, ನವೀನ್ ಸಜ್ಜು, ಇಂದು ನಾಗರಾಜ್, ಗುರುರಾಜ್ ಹೊಸಕೋಟೆ, ಸೈಂಧವಿ, ವೈಕಂ ವಿಜಯಲಕ್ಷ್ಮಿ ಹಾಗೂ ರವೀಂದ್ರ ಸೊರಗಾವಿ ಸೇರಿದಂತೆ 17 ಜನ ಹಾಡಿದ್ದಾರೆ.
ಈ ಚಿತ್ರವನ್ನು ಎಂ.ಪಿ. ಫಿಲಂಸ್ ಮೂಲಕ ಕೆ. ಮುನೀಂದ್ರ ಅವರು ರಿಲೀಸ್ ಮಾಡಿದ್ದರು. ಅವರ ಸಂಸ್ಥೆಯಿಂದ ಬಿಡುಗಡೆಯಾಗಿ 100 ದಿನ ಪೂರೈಸಿದ ಮೊದಲ ಚಿತ್ರವಿದು. ರಂಜನ್ ಕಾಸರಗೋಡು, ರಾನ್ವಿ ಶೇಖರ್, ಮೈಸೂರು ರಮಾನಂದ್, ಮಹೇಶ್, ಮೋಹಿತ್, ಮೂಗ್ ಸುರೇಶ್, ಪಂಕಜ, ಮೇಘಶ್ರೀ, ರಕ್ಷಾ ಗೌಡ, ಮಿಮಿಕ್ರಿ ಗೋಪಿ, ಚಂದ್ರಪ್ರಭ, ರಘು ರಾಮನಕೊಪ್ಪ ಹಾಗೂ ಇತರರು ಚಿತ್ರದಲ್ಲಿದ್ದಾರೆ.
ಇದನ್ನೂ ಓದಿ : ವಿಜಯಪುರದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ದುರ್ಮರಣ!








