ಬೆಂಗಳೂರು : ಈ ಹಿಂದೆ ಯಶ್ ಹುಟ್ಟುಹಬ್ಬದ ದಿನವೇ ಗದಗದ ಸೂರಣಗಿ ಗ್ರಾಮದಲ್ಲಿ ಯಶ್ ಕಟೌಟ್ ನಿಲ್ಲಿಸುವಾಗ ಕಬ್ಬಿಣದ ರಾಡ್ ವಿದ್ಯುತ್ ತಂತಿಗೆ ತಗುಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಈ ದುರ್ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಅಂಥದ್ದೇ ಘಟನೆ ನಡೆದಿದೆ. ನಟ ಯಶ್ ಬೆಂಗಾವಲು ವಾಹನ ಅಭಿಮಾನಿಯ ಕಾಲಿನ ಮೇಲೆ ಹರಿದು ಗಂಭೀರ ಗಾಯವಾದ ಘಟನೆ ಬಳ್ಳಾರಿಯ ಹೊರವಲಯದ ಬಾಲಾಜಿ ಕ್ಯಾಂಪ್ನಲ್ಲಿ ನಡೆದಿದೆ.
![](https://btvkannada.com/wp-content/uploads/2024/02/WhatsApp-Image-2024-02-29-at-4.06.18-PM-300x169.jpeg)
ಬಳ್ಳಾರಿಯ ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನ ಉದ್ಘಾಟನೆಗೆ ಯಶ್ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಯಶ್ ಅವರ ಕಾರನ್ನು ಬೆನ್ನು ಹತ್ತಿ ಫ್ಯಾನ್ಸ್ ಬಂದಿದ್ದರು. ಈ ವೇಳೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ಬೆಂಗಾವಲು ವಾಹನದ ಚಕ್ರ ಹರಿದಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.
![](https://btvkannada.com/wp-content/uploads/2024/02/WhatsApp-Image-2024-02-29-at-4.18.15-PM-300x169.jpeg)
————————————————————————————————————————————————
ಈ ಹಿಂದೆ ಗದಗದಲ್ಲಿ ಏನಾಗಿತ್ತು? ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ಕೆಲವು ಯುವಕರು ಸೇರಿ ಬೃಹತ್ ಗಾತ್ರದ ಕಟೌಟ್ ರೂಪಿಸಿ ಅದನ್ನು ಕಟ್ಟುವ ಹಂತದಲ್ಲಿ ಅದು ವಿದ್ಯುತ್ ತಂತಿಗೆ ಸ್ಪರ್ಶಿಸಿತ್ತು. ಇದರಿಂದ ಹನುಮಂತ, ಮುರಳಿ ನಡುವಿನಮನಿ ಮತ್ತು ನವೀನ್ ಗಾಜಿ ಎಂಬ ಮೂವರು ಯುವಕರು ಮೃತಪಟ್ಟರೆ, ಮಂಜುನಾಥ್, ದೀಪಕ್, ಪ್ರಕಾಶ್ ಮ್ಯಾಗೇರಿ ಎಂಬುವವರು ಗಾಯಗೊಂಡಿದ್ದರು. ಇದಾದ ಬಳಿಕ ಯಶ್ ಅವರು ಮೃತಪಟ್ಟ ಮೂವರು ಅಭಿಮಾನಿಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.
ಇದನ್ನೂ ಓದಿ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಸ್ಪರ್ಧೆ ಫಿಕ್ಸ್ – ಅಧಿಕೃತ ಘೋಷಣೆ..!
Post Views: 574