ವಿಜಯಪುರ : ವಿಜಯಪುರದ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟವೊಂದರಲ್ಲಿ ಆಟವಾಡುತ್ತಿದ್ದ ಕಂದ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದೆ. 20 ಅಡಿಯ ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಸಾತ್ವಿಕ್ಗಾಗಿ ರಾಜ್ಯಾದ್ಯಂತ ಜನರ ಮನ ಮಿಡಿಯುತ್ತಿದೆ. ಇದೀಗ NDRF ಟೀಂ ಹೈದ್ರಾಬಾದ್ನಿಂದ ಆಗಮಿಸಿದ್ದು, ಅಗ್ನಿಶಾಮಕ ದಳ, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲರೂ ರಾತ್ರಿ ಇಡೀ ಕಣ್ಣಿಗೆ ನಿದ್ದೆ ಇಲ್ಲದೇ ಸಾತ್ವಿಕ್ನ ರಕ್ಷಣೆ ಮಾಡಲು ತೊಡಗಿದ್ದಾರೆ.
ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 20 ಅಡಿ ಆಳದಲ್ಲಿ ಬಾಲಕ ಸಿಲುಕಿದ್ದು ಕೊಳವೆಬಾವಿ ಪಕ್ಕದಲ್ಲಿ ಸಮಾನಾಂತರವಾಗಿ 2 ಜೆಸಿಬಿ ಬಳಸಿ ಗುಂಡಿಯನ್ನು ತೋಡಿ ಮಣ್ಣನ್ನು ಹೊರತೆಗೆದು ಮಗುವಿರುವ ಸ್ಥಳದ ಬಳಿಗೆ ರಕ್ಷಣಾ ತಂಡ ಸಮೀಪಿಸುತ್ತಿದೆ. ದಾಮೋದರ್ ಸಿಂಗ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಾರ್ಯಾಚರಣೆ ನೋಡಲು ಜನ ಕಿಕ್ಕಿರಿದು ಸೇರಿದ್ದಾರೆ.
ಮಗುವಿಗೆ ಉಸಿರಾಟದ ಸಮಸ್ಯೆಯಾಗದಂತೆ ಅಧಿಕಾರಿಗಳು ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದಾರೆ. ಎಲ್ಲವನ್ನೂ ಕ್ಯಾಮೆರಾ ಮೂಲಕ ನಿಗಾ ವಹಿಸಲಾಗಿದ್ದು, ಮಗುವಿನ ಚಲನವಲನ ಸೆರೆಯಾಗಿದೆ. ಮಗುವಿನ ಎರಡು ಕಾಲುಗಳು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು ಕಾಲುಗಳು ಅಲ್ಲಾಡುತ್ತಿವೆ. ಆದಷ್ಟು ಬೇಗ ಮಗು ಹೊರಗೆ ಬರಲೆಂದು ಕುಟುಂಬಸ್ಥರು ಸೇರಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಬದುಕು ಸಾವಿನ ಮಧ್ಯೆ ಹೋರಾಡುತ್ತಿರುವು ಮಗುವಿನ ರಕ್ಷಣೆಗಾಗಿ ಕಾರ್ಯಚರಣೆ ಮುಂದುವರೆದಿದ್ದು, ಅಕ್ಕಪಕ್ಕದಲ್ಲಿ ಮಣ್ಣು ತೆರೆವುಗೊಳಿಸಿ ಮಗುವನ್ನ ಹೊರ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕಾರ್ಯಚರಣೆಗೆ ಬಂಡೆ ಕಲ್ಲುಗಳು ಅಡ್ಡಿಯಾಗುತ್ತಿದ್ದು, ಮಗುವಿಗೆ ಉಸಿರಾಟದ ತೊಂದರೆಯಾಗದಂತೆ ಸಿಬ್ಬಂದಿ ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದಾರೆ. ಕ್ಯಾಮೆರಾ ಮೂಲಕ ನಿಗಾ ವಹಿಸಲಾಗಿದ್ದು, ಮಗುವಿನ ಚಲನವಲನ ಸೆರೆಯಾಗಿದೆ.
ಇದನ್ನೂ ಓದಿ : ಮೈಸೂರು : ಬಿಯರ್ ತಯಾರಿಕ ಘಟಕದ ಮೇಲೆ ಅಬಕಾರಿ ಅಧಿಕಾರಿಗಳಿಂದ ದಾಳಿ – 98.52 ಕೋಟಿ ಮೌಲ್ಯದ ಬಿಯರ್, ಕಚ್ಚಾ ವಸ್ತು ವಶಕ್ಕೆ..!