ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸೂಕ್ತ ವಿಚಾರಣೆ ನಡೆಸಲು ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತದದಲ್ಲಿ ಅನುದಾನದ ಹಣವು ದುರುಪಯೋಗವಾಗಿರುವುದಾಗಿ ಆರೋಪಿಸಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಡೆತ್ನೋಟ್ ಬರೆದು ಮೇ 26 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಬೆನ್ನಲ್ಲೇ ನಿಗಮದಲ್ಲಿ ನಡೆದ ಬರೋಬ್ಬರಿ 187 ಕೋಟಿ ಹಗರಣ ಹಾಗೂ ಅಧೀಕ್ಷಕ ಆತ್ಮಹತ್ಯೆ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದೇ ವಿಚಾರವಾಗಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ರು. ಸರ್ಕಾರದ ವಿರುದ್ಧ ಆಕ್ರೋಶ ವಕ್ತಪಡಿಸಿದ್ರು.
ಇದೀಗ ಈ ಪ್ರಕರಣಗಳ ಹಾಗೂ ನಡೆದಿರುವ ಆರ್ಥಿಕ ಅವ್ಯವಹಾರಗಳ ಗಂಭೀರತೆಯನ್ನು ಸರ್ಕಾರವು ಪರಿಗಣಿಸಿ, ಈ ಕುರಿತು ಸಮಗ್ರ ತನಿಖೆಯನ್ನು ಕೈಗೊಳ್ಳಲು ತಾಂತ್ರಿಕ ಪರಿಣಿತಿ ಇರುವ ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಒಂದು ವಿಶೇಷ ತನಿಖಾ ತಂಡ (SIT) ರಚಿಸಿದೆ.
ವಿಶೇಷ ತಂಡದಲ್ಲಿ ಯಾರೆಲ್ಲಾ ಇದ್ದಾರೆ?
1. ಮನೀಷ್ ಖರ್ಬೀಕರ್ ಐಪಿಎಸ್, ಅಪರ ಪೊಲೀಸ್ ಮಹಾನಿರ್ದೇಶಕರು, ಆರ್ಥಿಕ ಅಪರಾಧಗಳು, ಸಿ.ಐ.ಡಿ. ಬೆಂಗಳೂರು. ( ತಂಡದ ಮುಖ್ಯಸ್ಥರು)
2. ಶಿವಪ್ರಕಾಶ್ ದೇವರಾಜು, ಐಪಿಎಸ್, ಉಪ ಪೊಲೀಸ್ ಆಯುಕ್ತರು, ಸಂಚಾರ ದಕ್ಷಿಣ ವಿಭಾಗ, ಬೆಂಗಳೂರು ನಗರ.
3. ಹರಿರಾಮ್ ಶಂಕರ್ ಐಪಿಎಸ್. ಪೊಲೀಸ್ ಅಧೀಕ್ಷಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು.
4. ಶ್ರೀ ರಾಘವೇಂದ್ರ ಕೆ. ಹೆಗಡೆ, ಪೊಲೀಸ್ ಅಧೀಕ್ಷಕರು, ಸಿ.ಐ.ಡಿ. ಬೆಂಗಳೂರು.
ಇದನ್ನೂ ಓದಿ : ಪೊಲೀಸ್ ಕಾನ್ಸ್ಟೇಬಲ್ ಕೈಯಲ್ಲಿ ಅರಳಿದ ಐಪಿಎಸ್ ಅಧಿಕಾರಿ ಸತೀಶ್ ಕುಮಾರ್ ಸುಂದರ ಭಾವಚಿತ್ರ..!