ನೆಲಮಂಗಲ : ಲಾರಿ ಹಾಗೂ ಟೆಂಪೋ ಮಧ್ಯೆ ಭೀಕರ ಅಪಘಾತವಾಗಿ, ಟೆಂಪೊದಲ್ಲಿದ್ದ ಮೂವರು ದುರ್ಮರಣ ಹೊಂದಿದ ದಾರುಣ ಘಟನೆ ನೆಲಮಂಗಲ ತಾಲೂಕು ಕುಲುವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭಾನುವಾರ ಸಂಭವಿಸಿದೆ. ಯಾದಗಿರಿ ಮೂಲದ ಕಟ್ಟಡ ಕಾರ್ಮಿಕಾರದ ನರಸಪ್ಪ(35), ಹುಸೇನಪ್ಪ(34), ಶಿವಗಂಗಪ್ಪ(55) ಮೃತರು.
ಘಟನೆಯಲ್ಲಿ ಸಾಬಣ್ಣ, ಕಟ್ಟಪ್ಪ, ಬಂಗಾರಪ್ಪ, ಲಕ್ಷ್ಮಿ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತುಮಕೂರು-ಬೆಂಗಳೂರು ಮಾರ್ಗವಾಗಿ ಎರಡು ವಾಹನಗಳು ಚಲಿಸುತ್ತಿದ್ದವು. ಕುಲುವನಹಳ್ಳಿ ಬಳಿಯ ಗ್ರಾಮದಲ್ಲಿ ಕಾಂಕ್ರೀಟ್ ಕೆಲಸ ಮುಗಿಸಿ, ಟೆಂಪೋ ಹೆದ್ದಾರಿಗೆ ಪ್ರವೇಶಿಸುತ್ತಿದ್ದಂತೆ ಇಳಿಜಾರಿನಲ್ಲಿ ವೇಗವಾಗಿ ಬಂದ ಕ್ಯಾಂಟರ್ ಹಿಂಬದಿಯಿಂದ ಟೆಂಪೋಗೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರ್ಮಿಕರು ಮತ್ತು ಸಾಮಗ್ರಿಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು. ಕ್ರೇನ್ ಮುಖಾಂತರ ಡಿಕ್ಕಿಯಾದ ವಾಹನಗಳ ತೆರವು ಕಾರ್ಯ ನಡೆಸಲಾಗಿದೆ. ಘಟನೆಯಿಂದಾಗಿ ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು,ನೆಲಮಂಗಲ ಸಂಚಾರಿ ಪೊಲೀಸರು ಟ್ರಾಫಿಕ್ ಜಾಮ್ ತೆರವು ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 48ರ ಕುಲುವನಹಳ್ಳಿ ಪಂಚಾಯತಿ ಮುಂಭಾಗದ ನಿಲ್ದಾಣದ ಬಳಿ ಇಳಿಜಾರು ಹೆಚ್ಚಿರುವುದರಿಂದ ಹಾಗೂ ವಾರಂತ್ಯದಲ್ಲಿಅಧಿಕ ವಾಹನ ದಟ್ಟಣೆ, ಅತಿಯಾದ ವೇಗ, ಹೆದ್ದಾರಿ ದುರಸ್ತಿಯ ಕಾರಣಗಳಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಕಟ್ಟಡ ಕಾರ್ಮಿಕರು ಪ್ರಯಾಣಿಸುವ ವಾಹನಗಳ ಬಗ್ಗೆ ಆರ್ಟಿಒ ಇಲಾಖೆ ಮತ್ತು ಪೊಲೀಸ್ ಇಲಾಖೆ ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಬೀದರ್ನಲ್ಲಿ ಬಸ್-ಆಟೋ ಮಧ್ಯೆ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾ*ವು..!