ತುಮಕೂರು: ತುಮಕೂರಿನಲ್ಲಿ ಬಿಜೆಪಿಯಿಂದ ಸೋಮಣ್ಣಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅಸಮಾಧಾನ ಧಗದಗಿಸತೊಡಗಿದೆ. ಮೈತ್ರಿಕೂಟದ ಉಭಯ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ.
ಸೋಮಣ್ಣ ಈ ಕ್ಷೇತ್ರದವರೆಲ್ಲ ತುಮಕೂರು ನಗರ ಹೊರತುಪಡಿಸಿದರೆ ಬೇರೆಲ್ಲೂ ಸೋಮಣ್ಣ ಅವರ ಪರಿಚಯವೇ ಇಲ್ಲ. ಸೋಮಣ್ಣ ಅವರಿಗೆ ತುಮಕೂರು ಕ್ಷೇತ್ರದ ಉದ್ದ ಅಗಲಗಳೆ ಗೊತ್ತಿಲ್ಲ. ತುಮಕೂರು ರಾಜಕಾರಣವೇ ವಿಭಿನ್ನವಾದದ್ದು, ಅಂತದ್ರಲ್ಲಿ ಹೊರಗಿನಿಂದ ಬಂದಂತಹ ಸೋಮಣ್ಣ ಇಲ್ಲಿ ಗೆಲ್ಲುವುದು ಸಾಧ್ಯವೇ ಇಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ನ ಸ್ಥಳಿಯ ಮುಖಂಡರು ಮಾತನಾಡಿಕೊಳ್ಳುತ್ತಿದ್ದಾರೆ.
ತುಮಕೂರು ಕ್ಷೇತ್ರದ ಜನರ ನಾಡಿ ಮಿಡಿತ ಅರಿತಿರುವ ಯಾವುದಾದರೂ ಸ್ಥಳೀಯ ನಾಯಕರಿಗೆ ಟಿಕೆಟ್ ಕೊಡಬೇಕಿತ್ತು ಎನ್ನುವುದು ಸ್ಥಳೀಯ ಬಿಜೆಪಿ ಮುಖಂಡರ ಅಭಿಪ್ರಾಯವಾಗಿದೆ. ಟಿಕೆಟ್ ಹಂಚಿಕೆಗೂ ಮುನ್ನವೇ ತುಮಕೂರಿನಲ್ಲಿ ಸೋಮಣ್ಣ ಹೆಸರು ಕೇಳಿ ಬರುತ್ತಿದ್ದಂತೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಮಾಜಿ ಸಚಿವ ಲಿಂಗಾಯತರ ಪ್ರಭಾವಿ ಮುಖಂಡ ಮಾಧುಸ್ವಾಮಿ ನೇತೃತ್ವದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಹೈಕಮಾಂಡ್ವರೆಗೂ ಸ್ಥಳೀಯ ಬಿಜೆಪಿ ನಾಯಕರಿಂದ ಸೋಮಣ್ಣ ವಿರುದ್ಧ ದೂರುಗಳು ಹೋಗಿದ್ದವು. ಯಾವ ಕಾರಣಕ್ಕೂ ಬಾಹಿಹ ಅಭ್ಯರ್ಥಿಯಾಗಿರುವ ಸೋಮಣ್ಣಗೆ ಟಿಕೆಟ್ ನೀಡಬಾರದು ನೀಡಿದರು ಇಲ್ಲಿನ ಲಿಂಗಾಯತ ಮತದಾರರು ಸೋಮಣ್ಣ ಅವರನ್ನು ಬೆಂಬಲಿಸುವುದಿಲ್ಲ ಎಂದು ಹೈಕಮಾಂಡ್ ಗೆ ವರದಿ ಸಲ್ಲಿಸಿದ್ದರು.
ಇದರ ಬೆನ್ನಲ್ಲೇ ಯಡಿಯೂರಪ್ಪ ನಿವಾಸದಲ್ಲಿ ಸೋಮಣ್ಣ ಮತ್ತು ಮಾಧುಸ್ವಾಮಿ ಮದ್ಯೆ ಮಿತ್ರತ್ವ ಬೆಸೆಯುವಂತಹ ಪ್ರಯತ್ನವನ್ನ ಯಡಿಯೂರಪ್ಪ ಮತ್ತು ವಿಜಯೇಂದ್ರ ನಡೆಸಿದ್ದರು. ಅದಾದ ಬಳಿಕ ಸೋಮಣ್ಣಗೆ ಟಿಕೆಟ್ ಘೋಷಣೆಯಾಗಿದೆ. ಆದರೆ ಬಿಜೆಪಿಯಲ್ಲಿ ಅಸಮಾಧಾನ ಮಾತ್ರ ನಿಂತಿಲ್ಲ.
ಸೋಮಣ್ಣ ಕೇವಲ ಆರು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರದಿಂದ ಸೋಲನ್ನು ಅನುಭವಿಸಿದ್ದಾರೆ. ಅವರಿಗೆ ಮತ್ತೆ ಅವಕಾಶವನ್ನು ಯಾಕೆ ಕೊಡಬೇಕು? ಸ್ಥಳೀಯ ನಾಯಕರಿಗೆ ಕೊಡಬಹುದಿತ್ತಲ್ಲವೇ ಎಂದು ಮಾಧುಸ್ವಾಮಿ ಮತ್ತು ಇತರ ನಾಯಕರ ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ.
ಇತ್ತ ಮಿತ್ರ ಪಕ್ಷ ಜೆಡಿಎಸ್ ನಲ್ಲೂ ಸೋಮಣ್ಣಗೆ ಟಿಕೆಟ್ ನೀಡಿರುವ ಸಂಬಂಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸೋಮಣ್ಣ ಹಿಂದೆ ಜೆಡಿಎಸ್ ನಲ್ಲಿ ಇದ್ದು ಪಕ್ಷವನ್ನು ಬಿಟ್ಟು ಬಿಜೆಪಿ ಸೇರಿಕೊಂಡಿದ್ದರು. ಈಗ ಅವರ ಪರ ಮತ ಯಾಚಿಸುವುದು ಹೇಗೆ ಎಂದು ಜೆಡಿಎಸ್ ನ ಸ್ಥಳೀಯ ಕಾರ್ಯಕರ್ತರು ಜೆಡಿಎಸ್ ಹೈಕಮಾಂಡ್ ಅನ್ನು ಪ್ರಶ್ನಿಸತೊಡಗಿದ್ದಾರೆ. ಸೋಮಣ್ಣ ಅವರ ಹೆಸರನ್ನು ಬಿಜೆಪಿ ಏಕಾಏಕಿ ಘೋಷಿಸಿದೆ ಜೆಡಿಎಸ್ ನಾಯಕರಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಸರ್ವಸಮತ ಅಭ್ಯರ್ಥಿಯನ್ನು ಘೋಷಿಸಬಹುದಿತ್ತು ಎಂದು ಜೆಡಿಎಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವೆಲ್ಲದರ ಒಟ್ಟು ಪರಿಣಾಮವಾಗಿ ಸೋಮಣ್ಣಗೆ ಈಗ ತುಮಕೂರಿನಲ್ಲಿ ಪ್ರಚಾರ ನಡೆಸುವ ಭಾರಿ ಸವಾಲು ಎದುರಾಗಿದೆ. ಬೆಂಗಳೂರಿನಿಂದ ತುಮಕೂರಿಗೆ ಹೋಗಿ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ ಗೆಲ್ಲಲು ಭಾರಿ ಪ್ರಯತ್ನ ಪಡಬೇಕಾದ ಅನಿವಾರ್ಯತೆ ಸೋಮಣ್ಣಗೆ ಎದುರಾಗಿದೆ. ತಲೆಗೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸೋಮಣ್ಣ ಬೆಂಬಲಕ್ಕೆ ನಿಲ್ಲದೆ ಹೋದರೆ ಸೋಮಣ್ಣ ಇಲ್ಲೂ ಈ ಬಾರಿಯೂ ಗೆಲ್ಲುವುದು ಕಷ್ಟಕರವಾಗಬಹುದು ಎಂದು ಸ್ಥಳೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
– ಬಿಟಿವಿ ನ್ಯೂಸ್ desk