ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಮಲ ಅರಳಿಸಲು ಬಿಗ್ ಪ್ಲಾನ್ ನಡೆದಿದೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಬಿಜೆಪಿಯಿಂದ ಬೃಹತ್ ಕಾರ್ ರ್ಯಾಲಿ ನಡೆಯುತ್ತಿದೆ. ನಮೋ ವಿಜಯಸಂಕಲ್ಪ ಯಾತ್ರೆಗೆ ವಿಶ್ವನಾಥ್ ಚಾಲನೆ ನೀಡಿದ್ದು, ಈ ವೇಳೆ ಯಲಹಂಕ ವಿಶ್ವನಾಥ್ಗೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಾಥ್ ನೀಡಿದ್ದಾರೆ. ಹಾಗೆಯೇ ವಿಶ್ವನಾಥ್ ಪುತ್ರ, ಯುವ ನಾಯಕ ಅಲೋಕ್ ವಿಶ್ವನಾಥ್ ಕೂಡ ಭಾಗಿಯಾಗಿದ್ದಾರೆ.
ಶಿವಗಂಗೆಯಿಂದ ನೆಲಮಂಗಲದವರೆಗೂ ಕಾರ್ ರ್ಯಾಲಿ ನಡೆಯಲಿದ್ದು, ಇದೀಗ ಕುಬೇರ ಮೂಲೆಯಿಂದ ವಿಶ್ವನಾಥ್ ಅವರು ಮೆರವಣಿಗೆ ಆರಂಭಿಸಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರು ಕಾರ್ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶಿವಗಂಗೆ ಬೆಟ್ಟ ಬುಡದಲ್ಲಿರುವ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಗಣೇಶನಿಗೆ ಆದಿ ಪೂಜೆ ಸಲ್ಲಿಸಿದರೆ ಒಳಿತಾಗುವ ನಂಬಿಕೆಯಿದ್ದು, 260ಕ್ಕೂ ಹೆಚ್ಚು ಕಾರುಗಳಲ್ಲಿ ಸಾವಿರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ಎಸ್.ಆರ್.ವಿಶ್ವನಾಥ್ ಲೋಕಸಭೆ ಎಲೆಕ್ಷನ್ಗೆ ಪಕ್ಷ ಸಜ್ಜುಗೊಳಿಸುತ್ತಿದ್ದು, ದಾಬಸ್ಪೇಟೆ, ತ್ಯಾಮಗೊಂಡ್ಲು, ಬೇಗೂರು, ಅರಿಶಿನಕುಂಟೆ, ನೆಲಮಂಗಲ, ರೈಲ್ವೆ ಗೊಲ್ಲಹಳ್ಳಿಯ ಆಂಜನೇಯ ದೇಗುಲ ಬಳಿ ಇಂದಿನ ರ್ಯಾಲಿ ಅಂತ್ಯವಾಗಲಿದೆ. ಎಸ್.ಆರ್.ವಿಶ್ವನಾಥ್ ಅವರು ಸುಮಾರು 60 ಕಿಲೋ ಮೀಟರ್ಗಳ ರ್ಯಾಲಿ ಮಾಡಲಿದ್ದು, ಈಗಾಗಲೇ ಬಿಜೆಪಿ ಕಾರ್ಯಕರ್ತರು ರ್ಯಾಲಿಗೆ ಹರಿದು ಬಂದಿದ್ದಾರೆ.
ರ್ಯಾಲಿ ಆರಂಭದ ವೇಳೆ ಎರಡು ಸಂಕಲ್ಪವನ್ನು ಮಾಡಿದ್ದಾರೆ. ಒಂದು ಮೋದಿಯವರು ಮತ್ತೆ ವಿಶ್ವನಾಯಕರಾಗಬೇಕು ಮತ್ತು ಇನ್ನೊಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿಗೆ ಗೆಲುವು ಸಿಗಬೇಕು ಅನ್ನೊ ಸಂಕಲ್ಪದಿಂದ ರ್ಯಾಲಿಯನ್ನು ಪ್ರಾರಂಭಿಸಿದ್ದಾರೆ.
ರ್ಯಾಲಿಯ ಬಳಿಕ ದೇವನಹಳ್ಳಿಯಲ್ಲಿರುವ ಬಿಜೆಪಿಯ ನೂತನ ಕಛೇರಿ ಉದ್ಘಾಟಣೆಯಾಗಲಿದೆ. ಈ ರ್ಯಾಲಿಗೆ ಪೊಲೀಸರು ಭದ್ರತೆಯನ್ನು ನೀಡಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಮತ್ತೆ ತಮ್ಮ ಕೈ ವಶಮಾಡಿಕೊಳ್ಳಲು ಬಿಜೆಪಿ ಈಗ ಧೃಡ ಸಂಕಲ್ಪವನ್ನು ಮಾಡಿದೆ. ಈ ಹಿನ್ನೆಲೆ ಎಸ್.ಆರ್.ವಿಶ್ವನಾಥ್ ಪಣತೊಟ್ಟು ಬೃಹತ್ ರ್ಯಾಲಿಯನ್ನು ನಡೆಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನಟ ಡಾಲಿ ಧನಂಜಯ್ ನೇಮಕ..!