ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಬಳಿಕ ಭಾರತದಲ್ಲಿ ರಾಮಯುಗ ಆರಂಭವಾಗಿದೆ. ಏಳಿಗೆ, ಸುಖ, ಸಮೃದ್ಧಿಯ ಕಾಲ ಪ್ರಾರಂಭವಾಗಿದ್ದು, ಶ್ರೀರಾಮ ಮಂದಿರದ ಆಸೆ ಅಸಂಖ್ಯಾತ ರಾಮಭಕ್ತರಲ್ಲಿ ಚಿಗುರೊಡೆದಿದೆ. ಅಯೋಧ್ಯೆಯಲ್ಲಿ ಮತ್ತೆ ಗತವೈಭವ ಮರುಕಳಿಸಿದ್ದು, ರಾಮಭಕ್ತರು ಸಂಭ್ರಮದಲ್ಲಿ ಮುಳುಗಿದ್ದಾರೆ. ರಾಮಮಂದಿರ ಲೋಕಾರ್ಪಣೆಯಾಗಿ ಇಡೀ ದೇಶ ಸಂತೋಷದ ವಿಶಾಲ ಸಾಗರದಲ್ಲಿ ಮಿಂದೆದ್ದಿದೆ.
ರಾಮನೂರಿನ ರಾಮಮಂದಿರದ ಗರ್ಭಗುಡಿಯಲ್ಲಿ ಶ್ರೀ ರಾಮ ವಿರಾಜಮಾನವಾಗಿ ಪ್ರತಿಷ್ಠಾಪನೆಗೊಂಡಿದ್ದಾನೆ. ರಾಮಲಲ್ಲಾ ದರ್ಶನದ ಕನಸು ನನಸಾಗುತ್ತಿರೋದೇ ಕೋಟಿ ಕೋಟಿ ಭಾರತೀಯರ ಪಾಲಿಗೆ ದೊಡ್ಡ ಶಕ್ತಿ ಸಿಕ್ಕಂತಾಗಿದೆ. ರಾಮ ಹುಟ್ಟಿದ ಊರಲ್ಲೇ ರಾಮಮಂದಿರವಿಲ್ಲ ಎಂಬ ಕೊರಗು ಮರೆಯಾಗಿದ್ದು, ರಾಮಲಲ್ಲಾನ ಮೂರ್ತಿಗೆ ದೈವೀಶಕ್ತಿ ಪ್ರಾಪ್ತಿಯಾಗಿದೆ.
ಮಧ್ಯಾಹ್ನದ ಅಭಿಜಿನ್ ಲಗ್ನದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆದಿದ್ದು, ಪ್ರಧಾನಿ ಮೋದಿ ಅಯೋಧ್ಯೆ ರಾಮಮಂದಿರ ಉದ್ಘಾಟಿಸಿದ್ದಾರೆ. ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಪೂರ್ಣಗೊಂಡಿದೆ. 500 ವರ್ಷಗಳ ಬಳಿಕ ಕೋಟ್ಯಾನುಕೋಟಿ ರಾಮಭಕ್ತರ ಬಯಕೆ ಕೊನೆಗೂ ಈಡೇರಿದೆ. ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ನೂತನ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿದೆ.
ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಹಿನ್ನೆಲೆ ಅಯೋಧ್ಯೆಯ ಇಡೀ ನಗರವನ್ನು 2500 ಕ್ವಿಂಟಾಲ್ಗೂ ಹೆಚ್ಚು ಹೂವಿನಿಂದ ಅಲಂಕರಿಸಲಾಗಿದೆ. ಪ್ರಾಣ ಪ್ರತಿಷ್ಠೆ ಪೂರ್ಣಗೊಂಡಿದ್ದು, ಕೆಲವೇ ಕ್ಷಣದಲ್ಲಿ ಭಕ್ತರಿಗೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಆದರೆ ಜನಸಂದಣಿ ಕಡಿಮೆಯಾದ ನಂತರ ಜನವರಿ 27ರ ನಂತರವೇ ದೇವಾಲಯಕ್ಕೆ ಭೇಟಿ ನೀಡುವಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭಕ್ತರಲ್ಲಿ ವಿನಂತಿ ಮಾಡಿದೆ.
ಇದನ್ನೂ ಓದಿ : ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಕರ್ನಾಟಕದಿಂದ ಗಣ್ಯರ ದಂಡು..!