ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ “ರತ್ನ” ಚಿತ್ರದ ಟ್ರೇಲರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರಿತ್ತಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಾನು “ಸೀನ” ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. “ಸೀನ” ಚಿತ್ರಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದ್ದು, ಪುನೀತ್ ರಾಜಕುಮಾರ್ ಅವರೆ. ಆನಂತರ ಚಿತ್ರೀಕರಣದ ವೇಳೆ ಕೆಲವು ತೊಂದರೆ ಬಂದಾಗ ನಿವಾರಣೆ ಮಾಡಿದ್ದು ಕೂಡ ಅವರೆ ಎಂದು ಪುನೀತ್ ಅವರನ್ನು ಸ್ಮರಿಸುತ್ತಾ ಭಾವುಕರಾದ ನಿರ್ದೇಶಕ ಬಸವರಾಜ್ ಬಳ್ಳಾರಿ, “ರತ್ನ” ಚಿತ್ರ ಅಪ್ಪು ಅವರಿಗಾಗಿಯೇ ಮಾಡಿರುವ ಚಿತ್ರ. ಅವರನ್ನು ದೇವರಂತೆ ಆರಾಧಿಸುವ ಅವರ ಅಭಿಮಾನಿಯ ಕುರಿತಾದ ಚಿತ್ರವಿದು. ನಮ್ಮ ಚಿತ್ರದ ನಾಯಕಿಯ ಪಾತ್ರದ ಹೆಸರು “ರತ್ನ”. ಆಕೆಗೆ ಅಪ್ಪು ಅವರೆ ಆರಾಧ್ಯ ದೈವ. ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಬೇಕೆಂಬ ಹಂಬಲ ಆಕೆಯದು. ಈ ರೀತಿ ಚಿತ್ರದ ಕಥೆ ಸಾಗುತ್ತದೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಏಪ್ರಿಲ್ 26 ಚಿತ್ರ ತೆರೆಗೆ ಬರಲಿದೆ ಎಂದರು.
ನಾನು ಈ ಚಿತ್ರದಲ್ಲಿ ನಿರ್ದೇಶಕನ ಪಾತ್ರ ಮಾಡಿದ್ದೇನೆ. ನಾನು ಸಹ ಪುನೀತ್ ರಾಜಕುಮಾರ್ ಅವರ ಅಪ್ಪಟ್ಟ ಅಭಿಮಾನಿ. ಅಪ್ಪು ಅವರ ಕುರಿತಾದ ಈ ಚಿತ್ರದಲ್ಲಿ ನಟಿಸಿರುವುದು ಸಂತೋಷವಾಗಿದೆ ಎನ್ನುತ್ತಾರೆ ನಾಯಕ ವರ್ಧನ್.
ವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಟ ಹಾಗೂ ಸಂಕಲನಕಾರ ನಾಗೇಂದ್ರ ಅರಸ್ ಹೇಳಿದರು. ಚಿತ್ರದಲ್ಲಿ ನನ್ನದು ನಟನ ಪಾತ್ರ ಎಂದು ಅಮಿತ್ ರಾವ್ ತಿಳಿಸಿದರು. ಆನಂದ್ ಅಪ್ಪು, ಸುಚೇತ್ ಹಾಗೂ ಸಹ ನಿರ್ಮಾಪಕರಾದ ಮಂಜುನಾಥ್, ರಾಘವೇಂದ್ರ ಕರೂರ್ ಮುಂತಾದವರು “ರತ್ನ” ಚಿತ್ರದ ಕುರಿತು ಮಾತನಾಡಿದರು.
ಹರ್ಷಲ ಹನಿ(ನಾಯಕಿ), ವರ್ಧನ್, ಆನಂದ್ ಅಪ್ಪು, ಬಾಲರಾಜ್ ಒಡೆಯರ್, ನಾಗೇಂದ್ರ ಅರಸ್, ಅಮಿತ್ ರಾವ್, ಸಾರಿಕಮ್ಮ, ರಾಣಿ ಬಸವರಾಜ್, ಸುಚಿತ್ ಚೌವ್ಹಾಣ್, ರಾಮು ಕರೂರ್, ಮಂಜು ದೈವಜ್ಞ ಮುಂತಾದವರು “ರತ್ನ” ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನು ಓದಿ: ಮೊಹಮ್ಮದ್ ನಲಪಾಡ್ಗೆ ಬೆಂಗಳೂರು ಸೆಂಟ್ರಲ್ ಟಿಕೆಟ್ : ಪ್ರಿಯಾಂಕ ಗಾಂಧಿ ಸೂಚನೆ..! – BTV Kannada