ಬೆಳಗಾವಿ : ಇಂದು ಸಿಎಂ ಸಿದ್ದರಾಮಯ್ಯನವರು 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಸಿದ್ದರಾಮಯ್ಯ ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದ್ದು, ಬಜೆಟ್ ಕುರಿತಾಗಿ ರಾಜ್ಯದ ಜನತೆಗೆ ಭಾರೀ ಕುತೂಹಲವಿದೆ. ಇದರ ನಡುವೆ ಬೆಳಗಾವಿ ಜಿಲ್ಲೆ ವಿಭಜನೆಯಾಗಲಿದೆಯಾ ಎಂಬ ಹೊಸ ಅನುಮಾನ ಶುರುವಾಗಿದೆ.
ಬಜೆಟ್ ಮಂಡನೆ ವೇಳೆ ಚಿಕ್ಕೋಡಿ, ಗೋಕಾಕ್ ನೂತನ ಜಿಲ್ಲೆಗಳಾಗಿ ಘೋಷಣೆ ಆಗುತ್ತಾ? ತುಮಕೂರು ಜಿಲ್ಲೆ ವಿಭಜಿಸಿ ಮಧುಗಿರಿ ಹೊಸ ಜಿಲ್ಲೆ ರಚನೆಯಾಗುತ್ತಾ? ಸಿಎಂ ಸಿದ್ದರಾಮಯ್ಯನವರು ಇಂದಿನ ಬಜೆಟ್ನಲ್ಲಿ ಘೋಷಣೆ ಮಾಡಲಿದ್ದಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
1997 ರಲ್ಲಿ ಅಂದಿನ ಸಿಎಂ ಜೆ.ಎಚ್.ಪಟೇಲ್ ಚಿಕ್ಕೋಡಿ, ಗೋಕಾಕ್ ಜಿಲ್ಲೆ ಘೋಷಿಸಿದ್ದರು. ಆದರೆ ಅಂದಿನ ಸರ್ಕಾರ ಗಡಿ ವಿವಾದ ಕಾರಣಕ್ಕೆ ವಿಭಜನೆ ವಾಪಸ್ ಪಡೆದಿತ್ತು. ಕಳೆದ 25 ವರ್ಷಗಳಿಂದ ಬೈಲಹೊಂಗಲ, ಅಥಣಿ ಜಿಲ್ಲೆ ವಿಭಜನೆ ಕೂಗು ನೆನೆಗುದ್ದಿಗೆ ಬಿದ್ದಿದೆ. ಹಾಗಾಗಿ ಇಂದು ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯನವರ ಮೇಲೆ ಎಲ್ಲರ ಕಣ್ಣಿದೆ.
ಕಳೆದ ಬಾರಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಬಾರಿ ಬಜೆಟ್ ಗಾತ್ರ 3 ಲಕ್ಷದ 27 ಸಾವಿರ ಕೋಟಿ ರೂಪಾಯಿ ಇತ್ತು. ಈ ವರ್ಷದ ಬಜೆಟ್ ಗಾತ್ರ 3 ಲಕ್ಷದ 50 ರಿಂದ 80 ಸಾವಿರ ಕೋಟಿ ರೂಪಾಯಿ ದಾಟುವ ಸಾಧ್ಯತೆಯಿದ್ದು, ಸಾಲದ ಹೊರೆಯೂ ಈ ಬಾರಿ ಹೆಚ್ಚಳವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭ : ಸಿಎಂ ಬಜೆಟ್ನಲ್ಲಿ ಬೆಂಗಳೂರಿನ ನಿರೀಕ್ಷೆಗಳೇನು?