ಬೆಂಗಳೂರು : ರಾಜ್ಯದ ಜನ ಎದುರು ನೋಡುತ್ತಿದ್ದ ದಿನ-ಕ್ಷಣ ಬಂದು ಬಿಟ್ಟಿದೆ. ಇಂದು ಕರುನಾಡಿನಲ್ಲಿ ಲೋಕಸಭಾ ಚುನಾವಣೆಯ ಮತಹಬ್ಬ ನಡೆಯಲಿದೆ. ದೇಶದಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದರೆ, ಕರುನಾಡ ಪಾಲಿಗೆ ಇದು ಮೊದಲ ಹಂತದ ಮತದಾನವಾಗಿದೆ.
ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ಮಾಡಲು ಅವಕಾಶವಿರುತ್ತದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಹಂತದ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗವು ಸಕಲ ಸಿದ್ಧತೆ ಕೈಗೊಂಡಿದ್ದು, 30,602 ಮತಗಟ್ಟೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಒಂದು ತಿಂಗಳಿನಿಂದಲೂ ನಾಯಕರ ಭಾಷಣ, ಭರಪೂರ ಭರವಸೆ ಕೇಳಿರೋ ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಲು ತಯಾರಾಗಿದ್ದಾರೆ.
ಬೆಂಗಳೂರಿನ ನಾಲ್ಕು ಕ್ಷೇತ್ರ ಜತೆಗೆ ಮಂಡ್ಯ, ಮೈಸೂರು, ತುಮಕೂರಿನಲ್ಲಿ ವೋಟಿಂಗ್ ನಡೆಯಲಿದೆ. ಹಾಗೆಯೇ ಹಾಸನ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಚಿತ್ರದುರ್ಗ ಹೀಗೆ ಒಟ್ಟು 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್ನ 14, ಬಿಜೆಪಿಯ 11, ಜೆಡಿಎಸ್ನ ಮೂವರು ಸೇರಿದಂತೆ 247 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಗೆ ಸೇರಲಿದೆ.
ಇನ್ನು ನಿನ್ನೆ ಬೆಳಗಿನಿಂದಲೇ 14 ಕ್ಷೇತ್ರಗಳಲ್ಲಿ ಮಸ್ಟರಿಂಗ್ ಮಾಡಿ ಇವಿಎಂ, ವಿವಿಪ್ಯಾಟ್, ಮತದಾರರ ಪಟ್ಟಿ, ಶಾಹಿ ಸೇರಿದಂತೆ ಚುನಾವಣೆ ಸಾಮಾಗ್ರಿ ರವಾನಿಸಲಾಗಿದೆ. ಇವುಗಳನ್ನ ಹೊತ್ತು ಚುನಾವಣೆ ಸಿಬ್ಬಂದಿ ಮತಗಟ್ಟೆ ಸೇರಿದ್ದಾರೆ.
ಒಟ್ಟು 2ಕೋಟಿ 88 ಲಕ್ಷದ 19 ಸಾವಿರದ 342 ಮತದಾರರು ಇಂದು ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1ಕೋಟಿ 44 ಲಕ್ಷದ 17ಸಾವಿರದ 530 ಪುರುಷ ಮತದಾರರು, 1ಕೋಟಿ 43ಲಕ್ಷದ 87ಸಾವಿರದ 585 ಮಹಿಳಾ ಮತದಾರರಿದ್ದಾರೆ. ಮತಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ಮತದಾನದ ವೇಳೆ ವೇಳೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ನರೇಗಾ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಹಕ್ಕು ಚಲಾಯಿಸಬಹುದು. 30ಸಾವಿರದ 600 ಮತಗಟ್ಟೆಗಳ ಪೈಕಿ 19,701 ಮತಗಟ್ಟೆಗಳಲ್ಲಿ ಲೈವ್ವೆಬ್ಕಾಸ್ಟ್ ಇರಲಿದೆ ಅಂತಾ ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ : ಮೈಸೂರಲ್ಲಿ ವಿನೂತನ ಮತದಾನ ಜಾಗೃತಿ : ಮತದಾನ ಮಾಡಿದರೆ ಒಂದು ಕೆಜಿ ಗೋಧಿ ಹಿಟ್ಟು ಫ್ರೀ..!