ದಾವಣಗೆರೆ : ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 3.98 ಲಕ್ಷ ಹಣ ಜೊತೆಗೆ 21 ಮೊಬೈಲ್ನ್ನು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಹೊಳೆಹರಹಳ್ಳಿ ಬಳಿ ಚುನಾವಣಾ ಚೆಕ್ಪೋಸ್ಟ್ನಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಕುರಿತು ದಾವಣಗೆರೆ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ವಿಜಯನಗರ : ಜಿಲ್ಲೆಯಲ್ಲಿ ದಾಖಲೆ ಇಲ್ಲದ 5.50 ಲಕ್ಷ ಹಣ ಪತ್ತೆಯಾಗಿದೆ. ಹೊಸಪೇಟೆಯ ಟಿಬಿ ಡ್ಯಾಂ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುತ್ತಿದ್ದಾಗ, ಕೊಪ್ಪಳದಿಂದ ಹೊಸಪೇಟೆಗೆ ಹೋಗ್ತಿದ್ದ ಬೈಕ್ನಲ್ಲಿ ಹಣ ಸಿಕ್ಕಿದೆ. ಟಿಬಿ ಡ್ಯಾಂ ಸಿಪಿಐ ಶ್ರೀಕಾಂತ್ ಎವಿ, ಪಿಎಸ್ಐ ಶೀಲಾ ಮೂಗಣ್ಣನವರ್,ಕ್ರೈಂ ಪಿಎಸ್ಐ ರವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೀತು. ಹಣಕ್ಕೆ ದಾಖಲೆ ನೀಡುವಂತೆ ಬೈಕ್ ಸವಾರನಿಗೆ ಸೂಚಿಸಿದ್ದಾರೆ.
ಚಿತ್ರದುರ್ಗ : ಚಿತ್ರದುರ್ಗ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ 108 ಸೀರೆಗಳ ಜಪ್ತಿ ಮಾಡಲಾಗಿದೆ. ನಗರದ JMIT ಬಳಿ ಚೆಕ್ಪೋಸ್ಟ್ನಲ್ಲಿ ತಪಾಸಣೆ ವೇಳೆ ಪತ್ತೆಯಾಗಿದ್ದು, ಬ್ಯಾಗ್ಗಳಲ್ಲಿ ತುಂಬಿಸಿ ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ಸೀರೆ ಸಮೇತ ಕಾರ್ನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಚಿತ್ರದುರ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಳ್ಳಾರಿ : ಸಿಂದವಾಳ ಗ್ರಾಮದ ಬಳಿಯ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 26 ಕೆಜಿ ಬೆಳ್ಳಿ ಮತ್ತು 3.55 ಲಕ್ಷ ರೂ. ಹಣವನ್ನು ಬಳ್ಳಾರಿಯಿಂದ ಆಂಧ್ರದ ಆದೋನಿ ಕಡೆ ಸಾಗಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.