ಬೆಂಗಳೂರು : ದಿವಂಗತ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಪ್ತಿಯಾಗಿದ್ದ ಒಡವೆ ಹಿಂತಿರುಗಿಸಲು ದಿನಾಂಕ ನಿಗದಿಯಾಗಿದೆ. ಬರೋಬ್ಬರಿ 27 ಕೆಜಿ ಜಿಲ್ಲಾಭರಣವನ್ನ ಮಾರ್ಚ್ 6 ಮತ್ತು 7 ರಂದು ಹಸ್ತಾಂತರಿಸಲು ತಮಿಳುನಾಡು ಸರ್ಕಾರಕ್ಕೆ ಬೆಂಗಳೂರು ಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರಿನ ವಿಶೇಷ ಕೋರ್ಟ್ 6 ಟ್ರಂಕ್ ಗಳೊಂದಿಗೆ ಬೆಂಗಳೂರಿಗೆ ಬರುವಂತೆ ತಮಿಳುನಾಡಿನ ಅಧಿಕಾರಿಗಳಿಗೆ ಸೂಚನೆ ನೀಡಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರು ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಜೈಲಿನಲ್ಲಿದ್ರು.
ವಿಚಾರಣೆ ಬೆಂಗಳೂರಿನಲ್ಲಿ ನಡೆದಿದ್ದರಿಂದ ಜಯಲಲಿತಾರಿಂದ ವಶಕ್ಕೆ ಪಡೆದಿದ್ದ ಆಭರಣ, ಸೀರೆ ಮತ್ತಿತರ ವಸ್ತುಗಳೂ ಬೆಂಗಳೂರಿನ ಕೋರ್ಟ್ ಸುಪರ್ದಿಯಲ್ಲೇ ಇದ್ದವು. ಇದೀಗ ಈ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲು ಕೋರ್ಟ್ ನಿರ್ಧರಿಸಿದೆ. 2024ರ ಮಾರ್ಚ್ 6 ಮತ್ತು 7ರಂದು ಕೋರ್ಟ್ ದಿನಾಂಕ ನಿಗದಿಪಡಿಸಿದೆ.
RTI ಕಾರ್ಯಕರ್ತ ಟಿ.ನರಸಿಂಹಮೂರ್ತಿ ಮೇಲ್ಮನವಿ ಹಿನ್ನೆಲೆಯಲ್ಲಿ ಆದೇಶ ನೀಡಿದ್ದು, ಜಯಲಲಿತಾರಿಂದ 7040 ಗ್ರಾಂ ತೂಕದ 468 ಬಗೆಯ ಚಿನ್ನ, ವಜ್ರ ಖಚಿತ ಆಭರಣ, 700 ಕೆ.ಜಿ. ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿ.ವಿ. ಸೆಟ್,
8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್. 24 ಟೂ-ಇನ್ ಒನ್ ಟೇಪ್ ರೆಕಾರ್ಡರ್, 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್, 1.93 ಲಕ್ಷ ನಗದು ಸೇರಿ ಹಲವು ವಸ್ತು ಜಪ್ತಿ ಆಗಿದ್ದವು.
ಹೀಗೆ 6 ದೊಡ್ಡ ಟ್ರಂಕ್ ಗಳಲ್ಲಿ ಜಯಲಲಿತಾರ ಅಮೂಲ್ಯ ವಸ್ತುಗಳನ್ನು ಬೆಂಗಳೂರಿನ ಕೋರ್ಟ್ ತಮಿಳುನಾಡಿಗೆ ಮರಳಿಸಲಿದೆ. ವ್ಯಾಜ್ಯ ಶುಲ್ಕವಾಗಿ ತಮಿಳುನಾಡು ಸರ್ಕಾರ ಕರ್ನಾಟಕಕ್ಕೆ 5 ಕೋಟಿ ರೂಪಾಯಿ ಪಾವತಿಸಬೇಕೆಂದು ಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ : ಜಗ್ಗೇಶ್ ಹೇಳಿಕೆ ತಿರುಚಿ ತೇಜೋವಧೆ : ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ FIR ದಾಖಲು..!