ಮುಂಬೈ : ರಾಹುಲ್ ದ್ರಾವಿಡ್ ಮಾರ್ಗದರ್ಶನದ ಟೀಂ ಇಂಡಿಯಾ 2024ರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ಇದೀಗ ಈ ಲೆಗಸಿಯನ್ನು ಮುಂದುವರಿಸಿ ಮತ್ತಷ್ಟು ಟ್ರೋಫಿ ಕೈವಶ ಮಾಡಲು ಟೀಂ ಇಂಡಿಯಾ ನೂತನ ಹೆಡ್ ಕೋಚ್ ಆಗಿ ಜವಾಬ್ದಾರಿ ಯಾರು ವಹಿಸಿಕೊಳ್ಳಲಿದ್ದಾರೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಹೌದು, ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನಿನ್ನೆ ಟ್ವೀಟ್ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಗಂಭೀರ್ ಆಯ್ಕೆಗೆ ಕಾರಣಗಳೇನು? 2003ರಿಂದ 2016ರವರೆಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡಿದ್ದ ಗೌತಮ್ ಗಂಭೀರ್ ಅವರು ಆರಂಭಿಕರಾಗಿ ಮೂರು ಮಾದರಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದವರು. 2007 ಮತ್ತು 2011ರ ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡದ ಪರ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿರುವ ಗೌತಮ್, ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ನಾಯಕರಾಗಿ ಮೂರು ಬಾರಿ ಕಪ್ ಗೆಲ್ಲಿಸಿದ್ದಾರೆ. 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಎಲ್ಲಾ ಸಾಧನೆ ಗಮನಿಸಿ ಬಿಸಿಸಿಐ ಗೌತಮ್ ಗಂಭೀರ್ ಅವರಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನ ನೀಡಿದೆ.
ಹೆಡ್ ಕೋಚ್ ಆದ ಬೆನ್ನಲ್ಲೇ ಗಂಭೀರ್ ಏನಂದ್ರು? ಇನ್ನು, ಟೀಮ್ ಇಂಡಿಯಾದ ಮುಖ್ಯ ಕೋಚ್ ಆದ ಬೆನ್ನಲ್ಲೇ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದು, ಭಾರತ ಎಂಬುದು ನನ್ನ ಅಸ್ತಿತ್ವ. ದೇಶ ಸೇವೆ ಮಾಡುವ ಭಾಗ್ಯ ಸಿಕ್ಕಿರುವುದು ನನ್ನ ಜೀವನದ ಅತಿದೊಡ್ಡ ಅವಕಾಶ. ಭಾರತ ಕ್ರಿಕೆಟ್ ತಂಡಕ್ಕೆ ವಿಭಿನ್ನ ರೋಲ್ನಲ್ಲಿ ಮರಳಿರುವುದು ಖುಷಿ ತಂದಿದೆ. ನನ್ನ ಗುರಿ ಒಂದೇ ಭಾರತೀಯರು ಹೆಮ್ಮೆಪಡುವಂತ ಕೆಲಸ ಮಾಡುವುದು. 1.4 ಬಿಲಿಯನ್ ಭಾರತೀಯರ ಕನಸಿಗೆ ಹೆಗಲು ಕೊಡುವುದು ಎಂದು ಬರೆದುಕೊಂಡಿದ್ದಾರೆ
ಇದನ್ನೂ ಓದಿ : ವಿಜಯನಗರ : ಗ್ರಾಹಕರ ಸೋಗಿನಲ್ಲಿ ಬಂದು 2.70 ಲಕ್ಷ ರೂ. ಮೌಲ್ಯದ ಚಿನ್ನ ಕದ್ದು ಪರಾರಿಯಾದ ಖತರ್ನಾಕ್ ಕಳ್ಳರು..!