ಬೆಂಗಳೂರು : ಮಾಜಿ ಸೈನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ಸರ್ಕಾರದಿಂದ ಜಮೀನು ಪಡೆದ ಮಾಜಿ ಸೈನಿಕರ ಗೃಹ ನಿರ್ಮಾಣ ಸಹಕಾರ ಸಂಘ ಅನರ್ಹರಿಗೆ ನಿವೇಶನ ವಿತರಿಸುವ ಮೂಲಕ ಭಾರೀ ಗೋಲ್ಮಾಲ್ ಎಸಗಿರುವುದು ಬೆಳಕಿಗೆ ಬಂದಿದೆ.
ಸಂಘದಲ್ಲಿ 2460 ಸದಸ್ಯರ ಪೈಕಿ ಐದು ಮಂದಿ ಮಾತ್ರ ಮಾಜಿ ಸೈನಿಕರು ಎಂಬುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಂತರಿಕ ತನಿಖೆಯಲ್ಲಿ ಗೊತ್ತಾಗಿದೆ. ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿ ಹಲವು ಸದಸ್ಯರಿಗೆ ಜಮೀನು ಹಂಚಿಕೆ ಮಾಡಲಾಗಿದೆ.
ಮಾಜಿ ಸೈನಿಕರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 1988 ರಿಂದ 1992 ನೇ ಸಾಲಿನವರೆಗೆ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದ ನಾನಾ ಸರ್ವೇ ನಂಬರ್ಗಳಲ್ಲಿ 41.07 ಎಕರೆ ಜಮೀನನ್ನು ಕಂದಾಯ ಇಲಾಖೆಯು ಮಂಜೂರು ಮಾಡಿದೆ. ಮಾಜಿ ಸೈನಿಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಇತರರು ನಿಯಮ ಉಲ್ಲಂಘಿಸಿ, ಮಾಜಿ ಸೈನಿಕರ ಬದಲಿಗೆ ಅನ್ಯರಿಗೆ ನಿವೇಶಗಳನ್ನು ಹಂಚಿಕೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಡಿಎ ವಿಚಕ್ಷಣಾ ದಳವು ತನಿಖಾ ವರದಿಯೊಂದಿಗೆ ನಿವೇಶನ ಹಂಚಿಕೆಯಲ್ಲಿ ಗೋಲ್ಮಾಲ್ ನಡೆಸಿರುವ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ 13 ಮಂದಿ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ದಾಖಲಿಸಿದೆ.
ವಿಚಕ್ಷಣಾ ದಳದ ಇನ್ಸ್ಪೆಕ್ಟರ್ ಟಿ.ಸಂಜೀವರಾಯಪ್ಪ ನೀಡಿರುವ ದೂರಿನ ಅನ್ವಯ ಒಳಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿಸಿರುವ ಆರೋಪದ ಮೇಲೆ 13 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಂಘದ ಅಧ್ಯಕ್ಷ ವಿಶ್ವರೂಪಾಚಾರ್, ಉಪಾಧ್ಯಕ್ಷ ಬಿ.ಎನ್.ಸೋಮಸುಂದರ್, ಕಾರ್ಯದರ್ಶಿ ಶಿವಕುಮಾರ್,ನಿರ್ದೇಶಕರಾದ ಎಸ್.ನಾಗಭೂಷಣ್, ಕೆ.ಎಸ್.ಸುಬ್ರಹ್ಮಣ್ಯ, ಬಿಎಸ್ಪಿ ಪ್ರಸಾದ್, ಬಿಡಿಎ ದಕ್ಷಿಣ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ರಾಮಾಂಜನೇಯಸ್ವಾಮಿ, ಸಹಕಾರ ಸೊಸೈಟಿ ಜಂಟಿ ರಿಜಿಸ್ಟ್ರಾರ್ ಪಾಂಡುರಂಗ ಗರ್ಗ್, ಉಪ ರಿಜಿಸ್ಟ್ರಾರ್ ಪಾಂಡುರಂಗಪ್ಪ ಸೇರಿ 13 ಮಂದಿ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಅಬ್ಬರಿಸಿ, ಬೊಬ್ಬಿರಿದ ಮಳೆರಾಯ.. ನಗರದ ಅನೇಕ ರಸ್ತೆಗಳು ಸಂಪೂರ್ಣ ಜಲಾವೃತ..!