ಬೆಂಗಳೂರು : ಇಂದು ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದ್ದು, ರಾಜ್ಯದ 14 ಸಂಸದೀಯ ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಯಾವುದೇ ಗೊಂದಲಗಳಿಲ್ಲದೆ ಮತದಾನ ಆರಂಭವಾಗಿದೆ. ಬೆಳಗ್ಗಿನಿಂದಲೇ ಜನ ಸಮಾನ್ಯರಿಂದ ಹಿಡಿದು, ಗಣ್ಯ ವ್ಯಕ್ತಿಗಳು, ಸೆಲೆಬ್ರಿಟಿಗಳು ಸೇರಿ ರಾಜಕಾರಣಿಗಳು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.
ಬೆಂಗಳೂರು ಉತ್ತರದಲ್ಲಿ ಬಿಜೆಪಿ ಮುಖಂಡರು ಮತ ಚಲಾಯಿಸುತ್ತಿದ್ದಾರೆ. ಜಾಲಹಳ್ಳಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಕುಟುಂಬ ಸದಸ್ಯರ ಜೊತೆ ಬಂದು ಸರತಿ ಸಾಲಿನಲ್ಲಿ ನಿಂತು ವೋಟಿಂಗ್ ಮಾಡಿದ್ದಾರೆ. ಮಲ್ಲೇಶ್ವರಂನ ಶಿಕ್ಷಾ ಸ್ಕೂಲ್ ಮತಕೇಂದ್ರದಲ್ಲಿ ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ಕುಟುಂಬ ಸಮೇತ ಬಂದು ಮತ ಚಲಾಯಿಸಿದ್ದಾರೆ.
ಇನ್ನು ಮಗನ ಮದುವೆ ಬ್ಯುಸಿ ನಡುವೆ ಮಾಜಿ ಸಚಿವ ಕೆ.ಗೋಪಾಲಯ್ಯ ದಂಪತಿ ಕಮಲಾನಗರದ ಅಮರವಾಣಿ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಗೋಪಾಲಯ್ಯ ಪುತ್ರ ಮದುವೆ ಮುಗಿಸಿಕೊಂಡು ಬಂದು ವೋಟ್ ಮಾಡುವುದಾಗಿ ತಿಳಿಸಿದ್ದಾರೆ.
ಶಾಂತಿನಗರ ವಿಧಾನಸಭೆ ಶಾಸಕ ಎನ್ ಎ ಹ್ಯಾರೀಸ್ ಅವರು ಕುಟುಂಬ ಸಮೇತ ಬಂದು ಬಿಗ್ರೇಡ್ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಕಾಮಸ್ ಕಾಲೇಜು ಮತಗಟ್ಟೆ ಸಂಖ್ಯೆ ೪ ರಲ್ಲಿ ಮತದಾನ ಮಾಡಿದ್ದಾರೆ. ಪುತ್ರ ಮಹಮ್ಮದ್ ನಲಪಾಡ್ ಕೂಡ ಮತ ಚಲಾಯಿಸಿದ್ದಾರೆ.
ಬೆಂಗಳೂರು ಸೆಂಟ್ರಲ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಮತದಾನ ಮಾಡಿದ್ದಾರೆ. ಜಯನಗರದ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮನ್ಸೂರ್ ಅಲಿಖಾನ್ ವೋಟ್ ಮಾಡಿದ್ದಾರೆ. ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಮತಗಟ್ಟೆ ಸಮೀಪದಲ್ಲಿ ನೋಡ ನೋಡುತ್ತಲೇ ನೆಲಕ್ಕುರಳಿದ ಬೃಹತ್ ಮರ..!