ಬೆಂಗಳೂರು : ಸ್ಯಾಂಡಲ್ವುಡ್ನ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. 81 ವರ್ಷದ ದ್ವಾರಕೀಶ್ ಬೆಂಗಳೂರಿನ ನಿವಾಸಲ್ಲಿ ಇಹಲೋಕ ತ್ಯಜಿಸಿದ್ದಾರೆ.
ದ್ವಾರಕೀಶ್ ಅವರ ಕೊನೆಯ ಕ್ಷಣ ಹೇಗಿತ್ತು..?
ದ್ವಾರಕೀಶ್ ಇಂದು ಬೆಳಗ್ಗೆ 7 ಗಂಟೆಗೆ ನಿದ್ರೆಯಿಂದ ಎದ್ದು, ಕಾಫಿ ಸೇವಿಸಿ ಪೇಪರ್ಗಳತ್ತ ಕಣ್ಣಾಯಿಸಿದ್ದರು. ಬೆಳಗ್ಗೆ 8 ಗಂಟೆ ಸುಮಾರಿಗೆ ಉಪಹಾರ ಸೇವನೆ ಮಾಡಿದ್ದರು. ನಂತರ 10 ಗಂಟೆ ಸುಮಾರಿಗೆ ಎದೆನೋವು ಕಾಣಿಸಿಕೊಂಡಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ದ್ವಾರಕೀಶ್ ಇಹಲೋಕ ತ್ಯಜಿಸಿದ್ದಾರೆ. ದ್ವಾರಕೀಶ್ ನಿವಾಸ ಎಲೆಕ್ಟ್ರಾನಿಕ್ ಸಿಟಿಯಲ್ಲಿದ್ದು, ಇವರ ಪಾರ್ಥೀವ ಶರೀರ ನಿವಾಸದಲ್ಲೇಯಿದೆ.
ಸಿನಿಜೀವನ : ಕನ್ನಡ ಸಿನಿಮಾ ಲೋಕದಲ್ಲಿ ಇತಿಹಾಸ ನಿರ್ಮಿಸಿದ್ದ ದ್ವಾರಕೀಶ್ 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಇವರು ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ದ್ವಾರಕೀಶ್ ಫಾರಿನ್ನಲ್ಲಿ ಮೊದಲ ಕನ್ನಡ ಸಿನಿಮಾ ಶೂಟ್ ಮಾಡಿದ್ದರು. ಸಿಂಗಾಪೂರ್ನಲ್ಲಿ ರಾಜಾಕುಳ್ಳ ವಿದೇಶದಲ್ಲಿ ಚಿತ್ರೀಕರಣವಾಗಿತ್ತು, ಸಿಂಗಾಪೂರ್ನಲ್ಲಿ ಸಿನಿಮಾವನ್ನು ಶೂಟ್ ಮಾಡಿ ದಾಖಲೆ ಸಾಧಿಸಿದ್ದರು. ಶೃತಿ, ವಿನೋದ್ರಾಜ್, ಸುನಿಲ್, ಹೊನ್ನವಳ್ಳಿ ಕೃಷ್ಣರನ್ನು ಸೇರಿ ಹಲವು ನಟ-ನಟಿಯರನ್ನು ದ್ವಾರಕೀಶ್ ಚಿತ್ರರಂಗಕ್ಕೆ ಪರಿಚಯಿಸಿದ್ದರು.
ಡಾ. ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಉತ್ತಮ ಸ್ನೇಹಿತರಾಗಿದ್ದು, ಇವರಿಬ್ಬರು ಸ್ಯಾಂಡಲ್ವುಡ್ನ ಕಿಲಾಡಿ ಜೋಡಿ ಎಂದೇ ಖ್ಯಾತಿಯಾಗಿದ್ದರು. ದ್ವಾರಕೀಶ್-ಕೃಷ್ಣ 10ಕ್ಕೂ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿದ್ದು, ದ್ವಾರಕೀಶ್ ಮೊದಲ ಬಾರಿ ರಜಿನಿಕಾಂತ್ ಸಿನಿಮಾ ನಿರ್ಮಿಸಿದ್ದರು. ಶ್ರೀದೇವಿ-ರಜಿನಿಕಾಂತ್ ನಟನೆಯ ಸಿನಿಮಾ, ತಮಿಳಿನಲ್ಲಿ ಅಡತವಾರೀಸ್ ಸಿನಿಮಾಗಳನ್ನು ನಿರ್ಮಿಸಿದ್ದರು. ದ್ವಾರಕೀಶ್ ಅವರು ಕನ್ನಡ ಸಿನಿಮಾ ಲೋಕವನ್ನು ಉತ್ತುಂಗಕ್ಕೆ ಬೆಳೆಸಿದ್ದರು.
ಎವರ್ಗ್ರೀನ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ದ್ವಾರಕೀಶ್ ಅವರು ಡಾ.ರಾಜ್ಕುಮಾರ್ ಅಭಿನಯದಲ್ಲಿ ಸಾಲು-ಸಾಲು ಹಿಟ್ ಸಿನಿಮಾ ಮಾಡಿದ್ದರು. ಇವರ ಭಾಗ್ಯವಂತರು, ಮೇಯರ್ ಮುತ್ತಣ್ಣ ಬಾಕ್ಸಾಫೀಸ್ನಲ್ಲಿ ಮಿಂಚಿದ್ದವು. 52 ವರ್ಷದಲ್ಲಿ 52 ಸಿನಿಮಾಗಳನ್ನು ದ್ವಾರಕೀಶ್ ನಿರ್ಮಿಸಿದ್ದರು.
ಸಾಲು-ಸಾಲು ಸಿನಿಮಾ ಸೋತರೂ ಚಿತ್ರ ನಿರ್ಮಾಣ ಬಿಡದ ದ್ವಾರಕೀಶ್ : ಸಾಲು-ಸಾಲು ಸಿನಿಮಾ ಸೋತರೂ ಸ್ಯಾಂಡಲ್ವುಡ್ನ ಪ್ರಚಂಡ ಕುಳ್ಳ ಹಠಕ್ಕೆ ಬಿದ್ದು ಗೆಲ್ಲುತ್ತಿದ್ದರು. ಸಿನಿಮಾಗಳನ್ನು ನಿರ್ಮಿಸಲೆಂದೇ 13 ಮನೆಗಳನ್ನು ಮಾರಿದ್ದರು. ಆಯುಷ್ಮಾನ್ ಭವ ಸಿನಿಮಾ ಸೋತಾಗ ಇತ್ತೀಚೆಗೆ ಮನೆ ಮಾರಿಕೊಂಡಿದ್ದರು. ದ್ವಾರಕೀಶ್ ಅವರು HSR ಲೇಔಟ್ನಲ್ಲಿದ್ದ ಮನೆಯನ್ನ ಮಾರಾಟ ಮಾಡಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಿಲ್ಲಾ ಖರೀದಿ ಮಾಡಿ ಫ್ಯಾಮಿಲಿ ಜೊತೆ ವಾಸವಾಗಿದ್ದರು. ದ್ವಾರಕೀಶ್ ಅವರ ಪುತ್ರ ಯೋಗಿ ಕೂಡಾ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಇಬ್ಬರು ಮಕ್ಕಳನ್ನೂ ಸಿನಿಮಾಗೆ ತಂದು ಬೆಳೆಸಲು ಯತ್ನಿಸಿದ್ದರು. ಮಜ್ನು ಮತ್ತು ಹೃದಯ ಕಳ್ಳರು ಸಿನಿಮಾಗಳನ್ನು ದ್ವಾರಕೀಶ್ ಮಕ್ಕಳಿಗಾಗಿ ಮಾಡಿದ್ದರು.
ಇದನ್ನೂ ಓದಿ : ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ವಿಧಿವಶ..!